SUDDILIVE || SHIVAMOGGA
ರೈಲ್ವೆ ನಿಲ್ದಾಣದ ಎದುರು ಸಿಟಿ ಬಸ್ ತಡೆದು ಆಟೋ ಚಾಲಕರ ಪ್ರತಿಭಟನೆ-Auto-rickshaw drivers protest by blocking city buses in front of the railway station
ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣದ ಎದುರು ವೀರಭದ್ರೇಶ್ವರ ಬಸ್ನ್ನು ತಡೆದು ರೈಲ್ವೆ ಆಟೋ ನಿಲ್ದಾಣದ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ರೈಲ್ವೆ ನಿಲ್ದಾಣದ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಬಸ್ ನಿಲ್ಲಿಸಬೇಕು ಎಂದು ಸೂಚಿಸಲಾಗಿದ್ದರೂ, ವೀರಭದ್ರೇಶ್ವರ ಬಸ್ನ್ನು ಆಟೋ ನಿಲ್ದಾಣದವರೆಗೆ ತಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲಾಗುತ್ತಿದೆ ಎಂದು ಆಟೋ ಚಾಲಕರು ಆರೋಪಿಸಿದರು.
ಆರ್ಟಿಒ ಅಧಿಕಾರಿಗಳ ವಿರುದ್ಧ ಆಕ್ರೋಶ
ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಅಲ್ಲಾ ಭಕ್ಷಿ ಮಾತನಾಡಿ, ಒಂದು ವಾರದ ಹಿಂದೆ ಆರ್ಟಿಒ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಿಟಿ ಬಸ್ ಹಾಗೂ ಆಟೋ ಚಾಲಕರ ನಡುವಿನ ಸಮಸ್ಯೆ ಕುರಿತು ಕ್ರಮ ಕೈಗೊಂಡಿದ್ದರು. ಈ ವೇಳೆ ಬಸ್ ನಿಲುಗಡೆಗೆ ಸಂಬಂಧಿಸಿದಂತೆ ನಡೆದ ಕ್ರಮಕ್ಕೆ ವಿಡಿಯೋ ಹಾಗೂ ಫೋಟೋ ಸಾಕ್ಷ್ಯಗಳಿವೆ ಎಂದು ಹೇಳಿದರು.
ಸಿಟಿ ಬಸ್ಗಳನ್ನು ಸಿಟಿ ಬಸ್ ನಿಲ್ದಾಣದ ಸಮೀಪವೇ ನಿಲ್ಲಿಸಬೇಕು. ಆಟೋ ನಿಲ್ದಾಣದ ಬಳಿ ಬಸ್ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬಾರದು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದರು.
“ಆಟೋ ನಿಲ್ದಾಣದ ಬಳಿ ಬಸ್ ನಿಲ್ಲಿಸದಂತೆ ಆರ್ಟಿಒ ಅಧಿಕಾರಿಗಳಿಗೆ ಈಗಾಗಲೇ ತಿಳಿಸಿದ್ದೇವೆ. ಆದರೂ ಸಿಟಿ ಬಸ್ಗಳು ಮತ್ತೆ ಆಟೋ ಸ್ಟ್ಯಾಂಡ್ ಬಳಿಗೆ ಬಂದು ನಿಲ್ಲುತ್ತಿವೆ. ಇದರಿಂದ ಆಟೋ ಚಾಲಕರಿಗೆ ಅನ್ಯಾಯವಾಗುತ್ತಿದೆ,” ಎಂದು ಅಲ್ಲಾ ಭಕ್ಷಿ ಆಕ್ರೋಶ ವ್ಯಕ್ತಪಡಿಸಿದರು.
ಬಸ್ ಮಾಲೀಕರು ಹಾಗೂ ಚಾಲಕರನ್ನು ಪ್ರಶ್ನಿಸಿದಾಗ, ಆಟೋ ಚಾಲಕರ ವಿಚಾರದಲ್ಲಿ ಸಮಸ್ಯೆ ಇದೆ ಎಂದು ಹೇಳುತ್ತಾರೆ. ಆದರೆ ನಿಜವಾದ ಸಮಸ್ಯೆ ಏನು ಎಂಬುದನ್ನು ಆರ್ಟಿಒ ಅಧಿಕಾರಿಗಳು ಸ್ಥಳಕ್ಕೆ ಬಂದು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಬಸ್ ಮುಟ್ಟುಗೋಲು ಮಾಡುವವರೆಗೆ ಪ್ರತಿಭಟನೆ
ವೀರಭದ್ರೇಶ್ವರ ಬಸ್ ವಿರುದ್ಧ ಕ್ರಮ ಕೈಗೊಂಡು ಮುಟ್ಟುಗೋಲು ಹಾಕಿಕೊಳ್ಳುವವರೆಗೆ ಹಾಗೂ ಆರ್ಟಿಒ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಗೆ ಸ್ಪಷ್ಟನೆ ನೀಡುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಸದಸ್ಯರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಆಟೋ ಚಾಲಕರು ಬಸ್ ನಿಲುಗಡೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
