ಸುದ್ದಿಲೈವ್/ಶಿವಮೊಗ್ಗ
ಒಳಮೀಸಲಾತಿ ಕುರಿತು ಸರ್ವೋಚ್ಛ ನ್ಯಾಯಾಲಯ ಆಗಸ್ಟ್ ನಲ್ಲಿ ಆದೇಶ ಹೊರಡಿಸಿ ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದಿತ್ತು, ರಾಜ್ಯ ಸರ್ಕಾರ ಈ ಕುರಿತು ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಆದರೆ ಸಮಿತಿ ಮುಂದೆ ದತ್ತಾಂಶಗಳಿಲ್ಲದೆ ವರ್ಗೀಕರಣಕ್ಕೆ ಮುಂದಾಗಿರುವುದನ್ನ ಬಂಜಾರ ವಿದ್ಯಾರ್ಥಿ ಸಂಘ, ಬಂಜಾರ ಸಂಘದ ತಾಲೂಕ ಘಟಕ ಆಕ್ಷೇಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಂಜಾರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಿ.ಆರ್ ಗಿರೀಶ್ ಸರ್ಕಾರಕ್ಕೆ ಒಳಮೀಸಲಾತಿ ಜಾರಿಗೆಯನ್ನ ಯಾವ ಆಧಾರದ ಮೇರೆಗೆ ವರ್ಗೀಕರಿಸಿ ಜಾರಿಗೊಳಿಸುತ್ತದೆ ಎಂಬುದನ್ನ ಸ್ಪಷ್ಟಪಡಿಸದೆ ಮುಂದಾಗಿದ್ದು, ಸೂಕ್ತ ದತ್ತಾಂಶಗಳೇ ಇಲ್ಲದೆ ಬಂಜಾರ, ಭೋವಿ ಮತ್ತು ಇತರೆ ಸಮುದಾಯವನ್ನ ಕತ್ತಲಿನಲ್ಲಿಡಲು ಮುಂದಾಗಿದೆ ಎಂದು ದೂರಿದರು.
ಬಂಜಾರ ಸಮುದಾಯದ ಜನ ಸಂಖ್ಯೆಯ ವರದಿಯ ಆಧಾರವಾಗಲಿ, ತಾಂಡಾ ಅಭಿವೃದ್ಧಿ ನಿಗಮ ಮತ್ತು ಸರ್ಕಾರದ ಬಳಿ ಇಲ್ಲವಾಗಿದೆ. ದತ್ತಾಂಶವಿಲ್ಲದೆ ಇದನ್ನ ವರ್ಗೀಕರಿಸಿದರೆ ನಮ್ಮ ಹೋರಾಟ ಮುಂದುವರೆಯಲಿದೆ. ಬಿಜೆಪಿ ಈ ಹಿಂದೆ ಸಮುದಾಯಕ್ಕೆ ಕೈಹಾಕಿ ಅಧಿಕಾರ ಕಳೆದುಕೊಂಡಿದೆ. ಸಿದ್ದರಾಮಯ್ಯ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಎರಡು ತಿಂಗಳಲ್ಲಿ ವರದಿ ಸಲ್ಲಿಸಲು ಸೂಚಿಸಿದೆ ಇದು ಸಾಧ್ಯವೇ ಎಂದು ಪ್ರಶ್ನಿಸಿದರು.
ಡಿ.17 ರಂದು ಬೆಳಗಾವಿ ಸುವರ್ಣ ಸೌಧದ ಎದುರು ಭೋವಿ, ಬಂಜಾರ, ಕೊರಚ, ಕೊರಮ ಮಹಾ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟಿಸಲಾಗುವುದು. ಕಾಂತರಾಜು ಅವರ ವರದಿಯನ್ನ ಅಧಿಕೃತವಾಗಿ ಸರ್ಕಾರ ಇನ್ನೂ ಸ್ವೀಕರಿಸಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿ ರಚಿಸಿ ಸದಾಶಿವ ಆಯೋಗವನ್ನ ತಿರಸ್ಕರಿಸಲಾಗಿದೆ. ಹೀಗಿರುವಾಗ ಒಳಮೀಸಲಾತಿ ಜಾರಿ ಬಗ್ಗೆ ತೀರ್ಮಾನಿಸುವ ಮುನ್ನ ಸರ್ಕಾರ ಜಾತಿ ಜನಗಣತಿ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ 2025-26 ರಲ್ಲಿ ಜನಗಣತಿ ನಡೆಸುವುದಾಗಿ ಪ್ರಕಟಿಸಿದೆ. ಅಲ್ಲಿಯವರೆಗೆ ರಾಜ್ಯ ಸರ್ಕಾರ ಕಾಯಬೇಕು. ತಡೆಹಿಡಿದಿರುವ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರೆಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಶಿವಮೊಗ್ಗ ತಾಲೂಕು ಬಂಜಾರ ಸಂಘದ ಅಧ್ಯಕ್ಷರಾದ ಮಂಜುನಾಥ್ ನಾಯ್ಕ್, ಮಾಜಿ ತಾಲೂಕು ಅಧ್ಯಕ್ಷರಾದ ಹೇಮೇಶ್ ನಾಯ್ಕ್, ಬಂಜಾರ ಮಹಿಳಾ ಮುಖಂಡರಾದ ಶ್ರೀಮತಿ ಪುಷ್ಪಬಾಯಿ, ಪ್ರಮುಖರಾದ ಉಮಾಮಹೇಶ್ವರ ನಾಯ್ಕ್, ಮಂಜುನಾಯ್ಕ್ ಉಪಸ್ಥಿತರಿದ್ದರು.