ಸುದ್ದಿಲೈವ್/ಶಿವಮೊಗ್ಗ
ಅಕ್ರಮ ಮರಳುಗಾರಿಕೆ ಆರೋಪದ ಹಿನ್ನಲೆಯಲ್ಲಿ ಹೊಳಲೂರು ಹೋಬಳಿ ಹಾಡೋನಹಳ್ಳಿಗೆ ತಹಶೀಲ್ದಾರ್ ರಾಜೀವ್, ಗಣಿ ಮತ್ತು ಭೂ ವಿಜ್ಞಾನದ ಅಧಿಕಾರಿಗಳು ಮತ್ತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಸತ್ಯನಾರಾಯಣ್ ಮತ್ತು ಸಿಬ್ಬಂದಿಗಳ ಭೇಟಿ ನೀಡಿ ಟ್ರಂಚ್ ಹೊಡೆಸಿ ಬಂದಿದ್ದಾರೆ.
ಹಾಡೋನಹಳ್ಳಿಯ ನದಿಯಲ್ಲಿ ಇಂದು ಏಳೆಂಟು ವಾಹನಗಳು ಅಕ್ರಮ ಮರಳನ್ನ ಸಾಗಿಸುತ್ತಿವೆ ಎಂದು ಸ್ಥಳೀಯರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ತಹಶೀಲ್ದಾರ್, ಪೊಲೀಸರ ಜೊತೆ ಬಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಯಾವುದೇ ವಾಹನಗಳು ಪತ್ತೆಯಾಗಿಲ್ಲ.
ಈ ಬಗ್ಗೆ ತಹಶೀಲ್ದಾರ್ ರಾಜೀವ್ ಅವರು ಸುದ್ದಿಲೈವ್ ಗೆ ಮಾತನಾಡಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಯಾವುದೇ ವಾಹನಗಳು ಪತ್ತೆ ಆಗಿಲ್ಲ. ಅಕ್ರಮಮರಳುಗಳ ಸಂಗ್ರಹಗಳು ಪತ್ತೆಯಾಗಿಲ್ಲ ಹಾಗಾಗಿ ವಾಹನಗಳು ಓಡಾಡುವ ಸ್ಥಳದಲ್ಲಿ ಜೆಸಿಬಿಯಿಂದ ಟ್ರಂಚ್ ಹೊಡೆದು ಬರಲಾಗಿದೆ ಎಂದು ತಿಳಿಸಿದರು.
ಇದರಿಂದ ಶಿವಮೊಗ್ಗ ತಾಲೂಕಿನಲ್ಲಿ ತಾಲೂಕು ಆಡಳಿತ ಅಕ್ರಮ ಮರಳುಗಾರಿಕೆಗೆ ಖಡಕ್ ಎಚ್ಚರಿಕೆ ನೀಡಿದೆ. ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕಲು ಇನ್ನೂ ಹಲವು ಕ್ರಮ ಜರುಗಿಸಬೇಕಿದೆ. ಹಾಡೋನಹಳ್ಳಿಯ ಹೊಳೆಯಲ್ಲಿ ಮರಳಿನ ಕಲ್ಲುಗಳು ಪತ್ತೆಯಾಗಿದ್ದು, ಇದರಿಂದ ಮರಳುಗಾರಿಕೆ ನಡೆದಿರುವ ಕುರುಹು ಪತ್ತೆಯಾಗಿದೆ. ಈ ಅಕ್ರಮಗಳಿಗೂ ಬ್ರೇಕ್ ಬೀಳಬೇಕಿದೆ.