SUDDILIVE || SHIVAMOGGA
‘ಹರಿಪ್ರಸಾದ್ ಬಚ್ಚ ಹಾಗೂ ಗೂಂಡಾ, ಜೈಲಿನಲ್ಲಿರಬೇಕಾದವರು’ ಎಂದು ಈಶ್ವರಪ್ಪ ವಾಗ್ದಾಳಿ-"Hariprasad is a thug and a goonda; he belongs in jail," lashed out Eshwarappa
ಶಿವಮೊಗ್ಗ: ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದು, “ಗೂಂಡಾ ಪ್ರವೃತ್ತಿಯ ಹರಿಪ್ರಸಾದ್ಗೆ ಆರ್ಎಸ್ಎಸ್ನ ಮಹತ್ವ ಏನು ಗೊತ್ತು?” ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, “ಗೂಂಡಾ ರೀ ಹರಿಪ್ರಸಾದ್... ಜೈಲಿನಲ್ಲಿ ಇರಬೇಕಾದಂತಹ ಹರಿಪ್ರಸಾದ್ಗೆ ಆರ್ಎಸ್ಎಸ್ನ ಮಹತ್ವ ಏನು ಗೊತ್ತು?” ಎಂದು ಕಿಡಿಕಾರಿದರು. ಹರಿಪ್ರಸಾದ್ ಅವರು ದೇಶಪ್ರೇಮ, ಆರ್ಎಸ್ಎಸ್ ಹಾಗೂ ತಾಲಿಬಾನ್ ಸಂಘಟನೆ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಈಶ್ವರಪ್ಪ ಈ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ‘ವಂದೇ ಮಾತರಂ’ ಕುರಿತು ಮಾತನಾಡಿರುವ ವಿಚಾರವನ್ನೂ ಪ್ರಸ್ತಾಪಿಸಿದ ಈಶ್ವರಪ್ಪ, ಕಾಂಗ್ರೆಸ್ನ ಪ್ರಮುಖ ನಾಯಕಿಯೇ ವಂದೇ ಮಾತರಂನ ಮಹತ್ವದ ಬಗ್ಗೆ ಈ ರೀತಿಯ ಹೇಳಿಕೆ ನೀಡಿದರೆ, ಕಾಂಗ್ರೆಸ್ನ ಇತರ ನಾಯಕರು ಅದನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಟೀಕಿಸಿದರು.
ಆರ್ಎಸ್ಎಸ್ನ ಕೊಡುಗೆಯನ್ನು ವಿವರಿಸಿದ ಈಶ್ವರಪ್ಪ, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಪ್ರಮುಖ ನಾಯಕರು ಆರ್ಎಸ್ಎಸ್ನಿಂದ ಪ್ರೇರಣೆ ಪಡೆದವರು ಎಂದು ಹೇಳಿದರು.
ಕಾಶ್ಮೀರದ ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜ ಹಾರಿಸುವ ವಿಚಾರವನ್ನು ಉಲ್ಲೇಖಿಸಿದ ಅವರು, ದೇಶಭಕ್ತಿಯ ಮನೋಭಾವದಿಂದ ಅಲ್ಲಿಗೆ ತೆರಳಿ ತ್ರಿವರ್ಣ ಧ್ವಜ ಹಾರಿಸಿದವರಲ್ಲಿ ಆರ್ಎಸ್ಎಸ್ ಸ್ವಯಂಸೇವಕರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ತಾವು ಯಡಿಯೂರಪ್ಪ, ಡಿ.ಎಚ್. ಶಂಕರಮೂರ್ತಿ, ರಾಮಚಂದ್ರ ಗೌಡ, ಡಾ. ಎಂ.ಆರ್. ತಂಗಾ ಸೇರಿದಂತೆ ಕರ್ನಾಟಕದ ಹಲವು ಮುಖಂಡರೊಂದಿಗೆ ಕಾಶ್ಮೀರಕ್ಕೆ ತೆರಳಿದ್ದನ್ನು ಈಶ್ವರಪ್ಪ ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು.
“ಆರ್ಎಸ್ಎಸ್ನಿಂದ ಬೆಳೆದ ರಾಷ್ಟ್ರಭಕ್ತ ಯುವಕರು ಇಂದು ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಆರ್ಎಸ್ಎಸ್ನ ಸ್ಪೂರ್ತಿಯಿಂದ ದೇಶ ಒಗ್ಗಟ್ಟಾಗಿ ಉಳಿದಿದೆ” ಎಂದು ಈಶ್ವರಪ್ಪ ಹೇಳಿದರು.
