SUDDILIVE || SHIVAMOGGA
ಶಿವಮೊಗ್ಗದಲ್ಲಿ ‘ರೋಡ್ ನೆಟ್ವರ್ಕ್ ಗ್ರಿಡ್ ಪ್ಲಾನ್’ ವಿರುದ್ಧ ರೈತರ ಪ್ರತಿಭಟನೆ-Farmers protest against ‘Road Network Grid Plan’ in Shivamogga
ಶಿವಮೊಗ್ಗ: ಹೊಳೇಹೊನ್ನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರೂಪಿಸಲಾಗಿರುವ ‘ರೋಡ್ ನೆಟ್ವರ್ಕ್ ಗ್ರಿಡ್ ಪ್ಲಾನ್’ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಯೋಜನೆಗೆ ಸಂಬಂಧಿಸಿದಂತೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ರೈತ ಸಂಘದ ವತಿಯಿಂದ ಅಧಿಕೃತ ಆಕ್ಷೇಪಣೆ ಮನವಿಯನ್ನು ಸಲ್ಲಿಸಲಾಯಿತು.
ಅಧಿಸೂಚನೆ ಹೊರಬಿದ್ದು ತಿಂಗಳು ಕಳೆದಿದ್ದರೂ, ಪ್ರಸ್ತಾವಿತ ರಸ್ತೆ ಯಾವ ಗ್ರಾಮದಲ್ಲಿ, ಯಾವ ಸರ್ವೇ ನಂಬರ್ ಮೂಲಕ ಹಾದುಹೋಗಲಿದೆ ಎಂಬ ಸ್ಪಷ್ಟ ಮಾಹಿತಿಯನ್ನು ರೈತರಿಗೆ ನೀಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಯೋಜನೆಯ ಕುರಿತು ರೈತರಿಗೆ ಮಾಹಿತಿ ನೀಡದೆ ಮುಂದುವರಿಯುತ್ತಿರುವ ಅಧಿಕಾರಿಗಳ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಹಾಲಿ ಇರುವ ರಸ್ತೆಗಳು, ಕೆರೆಗಳು, ಗುಡ್ಡಗಳು ಹಾಗೂ ಹಳ್ಳ-ಕೊಳ್ಳಗಳನ್ನು ಪರಿಗಣಿಸದೆ ಅವೈಜ್ಞಾನಿಕವಾಗಿ ರಸ್ತೆ ಯೋಜನೆ ರೂಪಿಸಲಾಗಿದೆ ಎಂದು ರೈತ ಸಂಘಟನೆಗಳು ದೂರಿವೆ. ಯೋಜನೆ ಜಾರಿಯಾದರೆ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಜೀವನಾಧಾರವಾಗಿರುವ ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಆತಂಕವಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಭೂಮಿ ಕಳೆದುಕೊಳ್ಳುವ ಸಾಧ್ಯತೆ ಇರುವ ಪ್ರತಿಯೊಬ್ಬ ರೈತರಿಗೂ ಪ್ರತ್ಯೇಕವಾಗಿ ನೋಟಿಸ್ ನೀಡಿ, ಅವರ ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ಪಡೆಯಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ.
ರೈತರ ಕೃಷಿ ಭೂಮಿ ಹಾಗೂ ಜೀವನೋಪಾಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಯೋಜನೆ ಜಾರಿಗೊಳಿಸದೆ, ರೈತರ ಹಿತದೃಷ್ಟಿಯಿಂದ ‘ರೋಡ್ ನೆಟ್ವರ್ಕ್ ಗ್ರಿಡ್ ಪ್ಲಾನ್’ ಅನ್ನು ತಕ್ಷಣ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
Farmers protest against ‘Road Network Grid Plan’ in Shivamogga
