SUDDILIVE || SHIVAMOGGA
ಕೊಳೆತ ಹಣ್ಣು ಪತ್ತೆ: ದುರ್ಗಿಗುಡಿಯ ತನು ಜ್ಯೂಸ್ ಸೆಂಟರ್ ಸೀಜ್-Rotten fruit found: Tanu Juice Center in Durgigudi seized
ಆಹಾರ ಮಳಿಗೆಗಳ ಸ್ವಚ್ಛತೆ ಬಗ್ಗೆ ಎಸಿ ಡಾ. ಮೈತ್ರಿ ಖಡಕ್ ಎಚ್ಚರಿಕೆ
ಶಿವಮೊಗ್ಗ: ನಗರದ ದುರ್ಗಿಗುಡಿ ರಾಘವೇಂದ್ರ ಸ್ವಾಮಿ ಮಠದ ಎದುರಿನ ತನು ಜ್ಯೂಸ್ ಸೆಂಟರ್ನಲ್ಲಿ ಕೊಳೆತ ಹಣ್ಣುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಜ್ಯೂಸ್ ಸೆಂಟರ್ನ್ನು ಸೀಜ್ ಮಾಡಿದ್ದಾರೆ.
ಎಸಿ ಡಾ. ಮೈತ್ರಿ ನೇತೃತ್ವದಲ್ಲಿ ಇಂದು ನಡೆದ ಆಹಾರ ಮಳಿಗೆಗಳ ತಪಾಸಣೆಯಲ್ಲಿ ತನು ಜ್ಯೂಸ್ ಸೆಂಟರ್ನಲ್ಲಿ ಸ್ವಚ್ಛತೆ ಹಾಗೂ ಆಹಾರ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಲೋಪಗಳು ಕಂಡುಬಂದಿವೆ. ಕೊಳೆತ ಹಣ್ಣುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ದಾಳಿಯ ಬಳಿಕ ಮಾತನಾಡಿದ ಎಸಿ ಡಾ. ಮೈತ್ರಿ, ಆಹಾರ ಮಳಿಗೆಗಳಲ್ಲಿ FSSAI ಮಾರ್ಗಸೂಚಿಗಳಂತೆ ಸ್ವಚ್ಛತೆ ಮತ್ತು ಆಹಾರ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಹೆಚ್ಚಿನ ಆಹಾರ ಮಳಿಗೆಗಳಲ್ಲಿ ಸ್ವಚ್ಛತೆ ಕೊರತೆ
ದುರ್ಗಿಗುಡಿ ದರ್ಗಾ ಕಾಂಪ್ಲೆಕ್ಸ್ ಸೇರಿದಂತೆ ವಿವಿಧೆಡೆ ಸುಮಾರು 15 ಹೋಟೆಲ್ಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹಲವು ಆಹಾರ ಮಳಿಗೆಗಳಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದಿದ್ದು, ವಿಶೇಷವಾಗಿ ಅಡುಗೆ ಪ್ರದೇಶ, ಪಾತ್ರೆ ತೊಳೆಯುವ ಸ್ಥಳ ಹಾಗೂ ಇತರ ಪ್ರದೇಶಗಳಲ್ಲಿ ಗಲೀಜು ಕಂಡುಬಂದಿದೆ. ಕೆಲವು ಕಡೆ ಜಿರಳೆಗಳು ಓಡಾಡುತ್ತಿರುವುದು ಕೂಡ ಪತ್ತೆಯಾಗಿದೆ ಎಂದು ಎಸಿ ತಿಳಿಸಿದರು.
ಆಹಾರ ಮಳಿಗೆಗಳ ಮಾಲೀಕರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದ್ದು, ಲೋಪಗಳನ್ನು ಸರಿಪಡಿಸಿಕೊಳ್ಳಲು 15 ದಿನಗಳ ಗಡುವು ನೀಡಲಾಗಿದೆ. ಈ ಅವಧಿಯ ಬಳಿಕ ಮತ್ತೆ ಪರಿಶೀಲನೆ ನಡೆಸಲಾಗುವುದು. ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಆಹಾರ ಪರವಾನಗಿ ರದ್ದುಪಡಿಸಲು ಯಾವುದೇ ಹಿಂಜರಿಕೆ ಇರುವುದಿಲ್ಲ ಎಂದು ಡಾ. ಮೈತ್ರಿ ಎಚ್ಚರಿಸಿದರು.
ಎಕ್ಸ್ಪೈರಿ ಕೂಲ್ಡ್ರಿಂಕ್ಸ್ ಸೀಜ್
ತಪಾಸಣೆ ವೇಳೆ ಮಲ್ನಾಡ್ ರೆಸ್ಟೋರೆಂಟ್ನಲ್ಲಿ ಅವಧಿ ಮೀರಿದ ಕೂಲ್ಡ್ರಿಂಕ್ಸ್ಗಳು ಪತ್ತೆಯಾಗಿದ್ದು, ಅವುಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಈರುಳ್ಳಿ ಸೇರಿದಂತೆ ಕತ್ತರಿಸಿದ ತರಕಾರಿಗಳನ್ನು ಹಲವು ದಿನಗಳ ಕಾಲ ಫ್ರಿಡ್ಜ್ನಲ್ಲಿ ಸಂಗ್ರಹಿಸುವುದು ಹಾಗೂ ಬೋಂಡಾ, ಬಜ್ಜಿ ಮತ್ತಿತರ ಆಹಾರ ಪದಾರ್ಥಗಳನ್ನು ಪತ್ರಿಕೆಯಲ್ಲಿ ಸುತ್ತಿ ನೀಡುವ ಕುರಿತು ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಈ ಬಗ್ಗೆ ಆಹಾರ ಮಳಿಗೆಗಳಿಗೆ ಸೂಕ್ತ ಮಾರ್ಗಸೂಚಿ ನೀಡಲಾಗಿದೆ ಎಂದು ಎಸಿ ಹೇಳಿದರು.
ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ
ಕೆಲವು ಕಡೆ ಕೊಳೆತ ಮೀನು ಪತ್ತೆಯಾಗಿದ್ದು, ಅದರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ಬಳಿಕ ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಮೈತ್ರಿ ತಿಳಿಸಿದರು.
ಆಹಾರ ಸುರಕ್ಷತೆ ಕುರಿತು ಈಗಾಗಲೇ ಆಹಾರ ಸುರಕ್ಷತಾ ಸಂಸ್ಥೆಯಿಂದ ಕಾರ್ಯಾಗಾರ ನಡೆಸಿ, ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಆಹಾರ ಮಳಿಗೆಗಳ ಮಾಲೀಕರಿಗೆ ತರಬೇತಿ ಮತ್ತು ಮಾರ್ಗಸೂಚಿಗಳನ್ನು ನೀಡಲಾಗಿದೆ. ಆದರೂ ಕೆಲವು ಕಡೆ ನಿರ್ಲಕ್ಷ್ಯ ಮುಂದುವರಿದಿರುವುದು ಕಂಡುಬಂದಿದ್ದು, ಇದನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಸ್ಟ್ರೀಟ್ ಫುಡ್ ಸೆಂಟರ್ಗಳ ಮೇಲೂ ನಿಗಾ
ಪಾನಿಪುರಿ, ಚಾಟ್ಸ್, ಬೋಂಡಾ-ಬಜ್ಜಿ ಸೇರಿದಂತೆ ರಸ್ತೆ ಬದಿಯ ಆಹಾರ ಮಳಿಗೆಗಳ ಮೇಲೂ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು THO ತಂಡ ನಿಯಮಿತವಾಗಿ ಪರಿಶೀಲನೆ ನಡೆಸುತ್ತಿದೆ ಎಂದು ಎಸಿ ತಿಳಿಸಿದರು.
ಆಹಾರ ಪದಾರ್ಥಗಳಲ್ಲಿ ಬಣ್ಣಗಳು, ಟೇಸ್ಟಿಂಗ್ ಪೌಡರ್ ಹಾಗೂ ಇತರ ಪದಾರ್ಥಗಳ ಬಳಕೆಯ ಮೇಲೂ ನಿಗಾ ವಹಿಸಲಾಗುತ್ತಿದೆ. ನಿಯಮ ಉಲ್ಲಂಘಿಸಿ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಆಹಾರ ಮಾರಾಟ ಮಾಡುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
15 ದಿನಗಳ ಬಳಿಕ ಮತ್ತೆ ಪರಿಶೀಲನೆ
ಇಂದಿನ ತಪಾಸಣೆಗೆ ಮಾತ್ರ ಸೀಮಿತವಾಗದೆ, 15 ದಿನಗಳ ಬಳಿಕ ಇದೇ ಪ್ರದೇಶಗಳಲ್ಲಿ ಫಾಲೋಅಪ್ ತಪಾಸಣೆ ನಡೆಸಲಾಗುವುದು. ಈ ಹಿಂದೆ ಪರಿಶೀಲನೆ ನಡೆಸಿದ್ದ ಹೋಟೆಲ್ಗಳು ಹಾಗೂ ಇತರ ಆಹಾರ ಕೇಂದ್ರಗಳ ಮೇಲೂ ನಿರಂತರ ನಿಗಾ ಮುಂದುವರಿಯಲಿದೆ ಎಂದು ಡಾ. ಮೈತ್ರಿ ಸ್ಪಷ್ಟಪಡಿಸಿದರು.
ಆಹಾರ ಮಾದರಿಗಳ ಪರೀಕ್ಷಾ ವರದಿಯಲ್ಲಿ ನಕಾರಾತ್ಮಕ ಫಲಿತಾಂಶ ಬಂದರೆ, ಸಂಬಂಧಪಟ್ಟ ಮಳಿಗೆಗಳ ವಿರುದ್ಧ ಸೀಜರ್ ಹಾಗೂ ಪರವಾನಗಿ ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

