ಸುದ್ದಿಲೈವ್/ಶಿವಮೊಗ್ಗ
ವಿಮಾನಯಾನದ ಅನುಭವ ಪಡೆಯಲು ಈ ಹಿಂದೆ ರೈತರೊಬ್ಬರು ಶಿವಮೊಗ್ಗ ವಿಮಾನ (airport) ನಿಲ್ದಾಣದಿಂದ ಬೆಂಗಳೂರಿಗೆ ಹೋಗಿ ಬಂದಿದ್ದ ವಿಡಿಯೋ ವೈರಲ್ ಆಗಿತ್ತು . ಈಗ ತೋಟದ ಮಾಲೀಕರೊಬ್ಬರು ತಮ್ಮ ತೋಟಕ್ಕೆ ಕೂಲಿ ಕೆಲಸಕ್ಕೆ ಬರುತ್ತಿದ್ದ ಮಹಿಳೆಯರನ್ನು ವಿಮಾನದಲ್ಲಿ ಕರೆದೊಯ್ದು ಅವರ ಆಸೆ ಈಡೇರಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಶಿರಗಾನಹಳ್ಳಿಯ ರೈತ ವಿಶ್ವನಾಥ್ ತಮ್ಮ ತೋಟಕ್ಕೆ ಕೆಲಸ ಬರುತ್ತಿದ್ದ ಮಹಿಳೆಯರನ್ನು ವಿಮಾನದಲ್ಲಿ ಕರೆದೊಯ್ದಿದ್ದಾರೆ. ‘ಒಮ್ಮೆಯಾದರು ವಿಮಾನದಲ್ಲಿ ಹಾರಬೇಕುʼ ಎಂಬುದು ಕೆಲಸಕ್ಕೆ ಬರುತ್ತಿದ್ದ ಮಹಿಳೆಯರ ಬಯಕೆಯಾಗಿತ್ತು. ಹಾಗಾಗಿ ವಿಶ್ವನಾಥ್ ವಿಮಾನಯಾನದ ಟ್ರಿಪ್ ಪ್ಲಾನ್ ಮಾಡಿದ್ದರು.
ನಾನು ಆಗಾಗ ವಿಮಾನದಲ್ಲಿ ಹೋಗಿ ಬರುತ್ತಿದ್ದೆ. ನಮ್ಮ ತೋಟದಲ್ಲಿ ಕೆಲಸಕ್ಕೆ ಬರುತ್ತಿದ್ದ ಮಹಿಳೆಯರು ನಮ್ಮನ್ನೂ ವಿಮಾನದಲ್ಲಿ ಕರೆದುಕೊಂಡು ಹೋಗಿ ಎಂದು ಕೇಳಿದ್ದರು. ತಿರುಪತಿಗೆ ಹೋಗಿ ಬರುವ ಯೋಜನೆ ಇತ್ತು. ಆದರೆ ಟಿಕೆಟ್ ಸಿಗದಿದ್ದರಿಂದ ಗೋವಾ ಟಿಕೆಟ್ ಬುಕ್ ಮಾಡಿದ್ದೇವೆ. ಫೆ.20ರಂದು ವಿಮಾನದಲ್ಲಿಯೇ ಶಿವಮೊಗ್ಗಕ್ಕೆ ಹಿಂತಿರುಗುತ್ತೇವೆ.
ವಿಶ್ವನಾಥ್, ತೋಟದ ಮಾಲೀಕ
-----------------------------------------
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರೈತ ವಿಶ್ವನಾಥ್ ತಮ್ಮೊಂದಿಗೆ ಬಂದಿದ್ದ ಹತ್ತು ಮಹಿಳೆಯರ ಗ್ರೂಪ್ ಫೋಟೊ ತೆಗೆಸಿಕೊಂಡು ಖುಷಿ ಪಟಿದ್ದಾರೆ. ಅಲ್ಲದೆ ವಿಮಾನದಲ್ಲಿ ಎಲ್ಲರು ಒಟ್ಟಿಗೆ ಪ್ರಯಾಣಿಸುವ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಈ ವಿಡಿಯೋ, ಫೋಟೊಗಳು ಈಗ ವೈರಲ್ ಆಗಿವೆ. ಗೋವಾಗೆ ತೆರಳಿರುವ ಮಹಿಳೆಯರು ಪ್ರಮುಖ ಪ್ರವಾಸಿ ತಾಣಗಳು, ಬೀಚ್ಗೆ ಹೋಗಿ ಬರುವ ಯೋಜನೆ ಮಾಡಿಕೊಂಡಿದ್ದಾರೆ.
ವಿಶ್ವನಾಥ್ ಅವರು 15 ಎಕೆರೆ ಅಡಿಕೆ ತೋಟ ಹೊಂದಿದ್ದಾರೆ. ಈ ಮಹಿಳೆಯರು ತೋಟಕ್ಕೆ ನಿತ್ಯ ಕೆಲಸಕ್ಕೆ ಬರುತ್ತಿದ್ದರು.