ಸುದ್ದಿಲೈವ್/ಶಿವಮೊಗ್ಗ
ರೈತರ ತೋಟಗಳ ಮೇಲೆ ಅವೈಜ್ಞಾನಿಕ ಹೈಟೆನ್ಷನ್ ವಿದ್ಯುತ್ ಮಾರ್ಗವನ್ನ ಹಾದು ಹೋಗುವುದನ್ನ ವಿರೋಧಿಸಿ ಶಿಕಾರಿಪುರದ ತಾಲೂಕು ಕಚೇರಿ ಎದುರು ನಡೆಯುತ್ತಿರುವ ಬೃಹತ್ ಪ್ರತಿಭಟನೆ ಸಚಿವ ಮಧು ಬಂಗಾರಪ್ಪನವರು ಮನವಿ ಸ್ವೀಕರಿಸುವ ಮೂಲಕ ತಾತ್ಕಾಲಿಕ ಅಂತ್ಯ ಹಾಡಲಾಗಿದೆ.
ಕಳೆದ ಮೂರು ದಿನಗಳಿಂದ ಹೋರಾಟಗಾರ ತೀ.ನಾ.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿತ್ತು. ಇಂದು ಸಚಿವ ಮಧು ಬಂಗಾರಪ್ಪನವರು ಮನವಿಸ್ವೀಕರಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡುವ ಮೂಲಕ ಪ್ರತಿಭಟನೆಗೆ ತಾತ್ಕಾಲಿಕ ಇತಿಶ್ರೀ ಹಾಡಲಾಗಿದೆ.
ಈಸೂರಿನಿಂದ ಶಿಕಾರಿಪುರದ ವರೆಗೆ 110/111 ಕೆವಿ ಎಸ್ ಪಿ ಲೈನ್ ಡಿ.ಸಿ ಗೋಪುರವನ್ನ 4.5 ಕಿಮಿ ದೂರ ಕ್ರಮಿಸದೆ ಇದನ್ನ 23 ಕಿಮಿ ದೂರ ಕ್ರಮಿಸಿ ಬರುವುದರಿಂದ ಹಲವರ ರೈತರ ತೋಟಗಳು ಹಾಳಾಗಲಿದೆ. 4.5 ಕಿಮಿ ದೂರಕ್ಕೆ 12-15 ವಿದ್ಯುತ್ ಗೋಪುರಗಳು ಬರಲಿದೆ. ಇದರ ಬದಲಿಗೆ 45-50ಗೋಪುರಗಳನ್ನ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ರೈತು ಅಂದಿನ ಎಸಿಯ ವಿರುದ್ಧ, ಸಂಸದರ ವಿರುದ್ಧ, ಶಿಕಾರಿಪುರ ಶಾಸಕರ ವಿರುದ್ಧ ಪ್ರತಿಭಟಿಸಲಾಗಿದೆ.
ಇಂದು ಸಚಿವ ಮಧು ಬಂಗಾರಪ್ಪ ಪ್ರತಿಭಟನಾ ರೈತರ ಬಳಿ ಹೋಗಿ ಸಮಸ್ಯೆಯನ್ನ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಮೂರು ದಿನಗಳ ಒಳಗೆ ಬಗೆಹರಿಸುವ ಭರವಸೆ ನೀಡಿದ ಮೇರೆಗೆ ರೈತರು ಪ್ರತಿಭಟನೆ ಹಿಂಪಡೆದಿದ್ದಾರೆ.
ಈ ಕುರಿತು ಸುದ್ದಿಲೈವ್ ಗೆ ಮಾಹಿತಿ ನೀಡಿದ ರೈತ ಮುಖಂಡ ತೀ.ನಾ.ಶ್ರೀನಿವಾಸ್ ಸಚಿವರು ಮೂರು ದಿನಗಳ ಒಳಗೆ ಬಗೆಹರಿಸುವುದಾಗಿ ಭರವಸೆ ನೀಡಿದ ಕಾರಣ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಒಂದು ವೇಳೆ ಸಮಸ್ಯೆ ನಿಗದಿತ ಸಮಯದಲ್ಲಿ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಜೈಲ್ ಭರೋ ಚಳುವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.