SUDDILIVE || SHIVAMOGGA
ಅಡಿಕೆ ಹಾಳೆ ಹಾನಿಕಾರಕ ಅಲ್ಲ-ಎಲ್ಲಾ ಅಪಪ್ರಚಾರ-Arecanut leaf is not harmful - all propaganda
ಅಡಿಕೆ ಉದ್ಯಮದ ಮೇಲಿನ ದ್ವೇಷಕ್ಕೆ ಅಮೆರಿಕದ ಎಫ್ಡಿಎ ಸಂಸ್ಥೆಯು ಅಡಿಕೆ ಹಾಳೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂದು ಹೇಳಿದ್ದರಿಂದ ಅಮೆರಿಕವು ಅಡಿಕೆ ಹಾಳೆ ಎಕ್ಸಪೋರ್ಟ್ ಮೇಲೆ ನಿಷೇಧ ಹೇರಿದ್ದು, ತಕ್ಷಣವೇ ಕೇಂದ್ರ-ರಾಜ್ಯ ಸರ್ಕಾರಗಳು ಮಧ್ಯ ಪ್ರವೇಶಿಸಿ ಈ ಉದ್ಯಮವನ್ನು ಉಳಿಸಬೇಕೆಂದು ಜಿಲ್ಲಾ ಅಡಿಕೆ ಹಾಳೆ ಉತ್ಪಾದಕರು ಮತ್ತು ಮಾರಾಟಗಾರರ ಸಂಘ ಹಾಗೂ ಜಿಲ್ಲಾ ಕೈಗಾರಿಕಾ ಸಂಘವು ಮನವಿ ಮಾಡಿವೆ.
ನಗರದ ಪತ್ರಿಕಾ ಭವನದಲ್ಲಿ ಎರಡು ಸಂಘಗಳ ಪದಾಧಿಕಾರಿಗಳು ಜಂಟಿ ಪತ್ರಿಕಾಗೋಷ್ಟಿ ನಡೆಸುವ ಮೂಲಕ ಅಡಿಕೆ ಹಾಳೆ ಉತ್ಪಾದನಾ ಮತ್ತು ಮಾರಾಟದ ಉದ್ಯಮದ ಉಳಿವಿಗೆ ಕೇಂದ್ರ-ರಾಜ್ಯ ಸರ್ಕಾರಗಳು ತುರ್ತಾಗಿ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿದರು. ಜಿಲ್ಲಾ ಅಡಿಕೆ ಹಾಳೆ ಉತ್ಪಾದಕರು ಮತ್ತು ಮಾರಾಟಗಾರರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ದೇಶದಲ್ಲಿ ಇಂದು ಅಡಿಕೆ ಹಾಳೆ ಉತ್ಪಾದನೆ ಮತ್ತು ಮಾರಾಟದ ಉದ್ಯಮವೂ ಸಾವಿರಾರು ಕೋಟಿ ವಹಿವಾಟಿನ ಉದ್ಯಮವಾಗಿದೆ. ಒಂದು ಅಂದಾಜಿನ ಪ್ರಕಾರ ವರ್ಷಕ್ಕೆ ೩೫೦ ಸಾವಿರ ಕೋಟಿ ವಹಿವಾಟು ಇದೆ. ಇದನ್ನು ತಡೆಯುವುದರ ಹುನ್ನಾರದ ಭಾಗವಾಗಿಯೇ ಈಗ ಅಡಿಕೆ ಹಾಳೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎನ್ನುವ ಅಪಪ್ರಚಾರವನ್ನು ಮುನ್ನೆಲೆಗೆ ತರಲಾಗಿದೆ ಎಂದು ದೂರಿದರು.
ಅಡಿಕೆ ಹಾಳೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎನ್ನುವುದನ್ನು ಅಲ್ಲಗಳೆದ ಅವರು, ಅಂತಹ ಸಂಗತಿಯೇ ಶುದ್ದ ಸುಳ್ಳು. ಅಡಿಕೆ ಹಾಳೆ ತಯಾರಿಕಾ ರೀತಿಯೇ ಸಂಪೂರ್ಣ ಪರಿಸರ ಸ್ನೇಹಿಯಾಗಿ, ಅತ್ಯಂತ ನೈಸರ್ಗಿಕವಾಗಿ ನಡೆಯುತ್ತದೆ. ಅಡಿಕೆ ಹಾಳೆ ತಯಾರಿಸುವಾಗ ಮರದಿಂದ ಬಿದ್ದ ಹಾಳೆಯನ್ನು ೮೦ ರಿಂದ ೯೦ ದಿವಸ ಒಣಗಿಸಿ, ಆನಂತರ ಆರು ತಿಂಗಳು ಅದನ್ನು ಶೇಖರನೆ ಮಾಡಿಟ್ಟು, ಅಲ್ಯುಮಿನೀಯಂ ಪಾತ್ರೆಗಳ ಮೂಲಕ ಅದನ್ನು ಯಾವುದೇ ಕೆಮಿಕಲ್ ಪದಾರ್ಥಗಳನ್ನು ಬಳಸದೆ ತಯಾರು ಮಾಡಲಾಗುತ್ತದೆ. ಅಮೆರಿಕದವರೇ ಇಲ್ಲಿಗೆ ಬಂದಾಗ, ಅದು ಸಂಪೂರ್ಣವಾಗಿ ನೈಸರ್ಗಿಕವಾಗಿ ತಯಾರು ಆಗುವ ವಿಧಾನ ಮೆಚ್ಚಿಕೊಂಡು ಹೋಗಿದ್ದಾರೆ. ಇಷ್ಟು ನೈಸರ್ಗಿಕವಾಗಿ ತಯಾರಾಗುವ ಅಡಿಕೆ ಹಾಳೆಯನ್ನು ಈಗ ಒಂದು ಶುದ್ದ ಸುಳ್ಳು ಸಂಗತಿ ಹರಡುವ ಮೂಲಕ ಉದ್ಯಮವನ್ನು ಮುಗಿಸಲು ಹೊರಟಿದ್ದು ಅತ್ಯಂತ ಅಘಾತಕಾರಿ ಸಂಗತಿಯಾಗಿದೆ ಎಂದರು.
ದೇಶದ ಅಡಿಕೆ ಹಾಳೆ ತಯಾರಿಕೆ ಮತ್ತು ಮಾರಾಟದ ವಹಿವಾಟಿನಲ್ಲಿ ಕರ್ನಾಟಕ, ಅದರಲ್ಲೂ ಶಿವಮೊಗ್ಗ ಜಿಲ್ಲೆಯದ್ದೇ ದೊಡ್ಡ ಪಾಲು ಇದೆ. ಇಲ್ಲಿಂದ ಅಮೆರಿಕ ಸೇರಿದಂತೆ ಜಗತ್ತಿನ ೧೮ ರಾಷ್ಟ್ರ ಗಳಿಗೆ ಅಡಿಕೆ ಹಾಳೆ ರಫ್ತು ಆಗುತ್ತದೆ. ವಾರ್ಷಿಕ ಸಾವಿರಾರು ಕೋಟಿ ರೂ. ವಹಿವಾಟು ಇದೆ. ಅಡಿಕೆ ಹಾಳೆ ತಯಾರಿಕಾ ಘಟಕಗಳಿಂದ ೪೦ ಕೋಟಿ ರೂ. ಗೂ ಹೆಚ್ಚು ಕೆಇಬಿ ಬಿಲ್ ಪಾವತಿ ಆಗುತ್ತಿದೆ. ೫೦ ರಿಂದ ೬೦ ಸಾವಿರಕ್ಕೂ ಹೆಚ್ಚು ಜನರು ಇದರಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಸಾವಿರಾರು ಸಂಖ್ಯೆತ ರೈತರಿಗೂ ಇದರಿಂದ ಆದಾಯ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಅವರು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಗುರು ಪ್ರಸಾದ್ ಮಾತನಾಡಿ, ಅಮೆರಿಕದ ಎಫ್ ಡಿ ಎ(ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಟಿವ್ ) ಸಂಸ್ಥೆಯು ಬೇರೆತಹರ ಉತ್ಪನ್ನಗಳ ಲಾಭಿಗೆ ಮಣಿದು ಅಡಿಕೆ ಹಾಳೆ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಇದೇ ಸಂಸ್ಥೆ ಈ ಹಿಂದೆ ಮಾವು, ಬೇವು , ಅರಿಷಿಣ, ಅಕ್ಕಿ ಹಾಗೂ ಶುಂಠಿಗೂ ಇಂತಹದ್ದೇ ಸಂಶೋಧನಾ ವರದಿಯ ಸಂಗತಿಯನ್ನು ತೇಲಿಬಿಟ್ಟು, ಭಾರತದ ರಫ್ತು ವಹಿವಾಟಿಗೆ ದೊಡ್ಡ ಪ್ರಮಾಣದ ಹೊಡೆತ ನೀಡಿತ್ತು. ಅದರಿಂದ ಇಲ್ಲಿನ ರೈತರು ಭಾರೀ ನಷ್ಟ ಅನುಭವಿಸಿದ್ದರು. ಈಗ ಅದೇ ಕುತಂತ್ರವನ್ನು ಅಡಿಕೆ ಹಾಳೆ ವಿಚಾರದಲ್ಲೂ ನಡೆಸಿದೆ ಎಂದು ದೂರಿದರು.
ಅಡಿಕೆ ಹಾಳೆ ಕ್ಯಾನ್ಸರ ಕಾರಕ ಅಲ್ಲ, ಬೇಕಾದರೆ ತೃತೀಯ ಜಗತ್ತಿನ ಯಾವುದೇ ರಾಷ್ಟ್ರಗಳಲ್ಲಿ ಈ ಬಗ್ಗೆ ಸಂಶೋಧಗೆ ಒಳಪಡಿಸಲಿ ಎನ್ನುವ ಮನವಿ ಜತೆಗೆ ಉದ್ಯಮವನ್ನು ಉಳಿಸಬೇಕೆಂದು ಒತ್ತಾಯಿಸುವುದಕ್ಕಾಗಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಲು ನಿರ್ಧರಿಸಿದ್ದೇವೆ. ಹಾಗೆಯೇ ಅಡಕಕೆ ಕ್ಯಾನ್ಸರ್ ಕಾರಕ ಅಲ್ಲ ಎನ್ನುವ ಬಗ್ಗೆ ನಾವು ರಫ್ತು ಕಂಪನಿಗಳಿಗೆ ಸಲ್ಲಿಸಿದ್ದ ಸಂಶಧೋನಾ ವರದಿಗಳನ್ನು ಸರ್ಕಾರಕ್ಕೆ ನೀಡುವುದರ ಮೂಲಕ ಉದ್ಯಮವನ್ನು ಉಳಿಸುವ ನಿಟ್ಟಿನಲ್ಲಿ ಮಧ್ಯ ಪ್ರವೇಶಬೇಕೆಂದು ವಿನಂತಿಸಿಕೊಳ್ಳಲಿದ್ದೇವೆ ಎಂದು ತಿಳಿಸಿದರು.
ಸಾವಿರಾರು ಕೋಟಿ ರೂ, ವಹಿವಾಟಿನ ಒಂದು ರಫ್ತು ಉದ್ಯಮದ ಮೇಲೆ ಅವೈಜ್ಞಾನಿಕವಾದ ಹೇಳಿಕೆಗಳು ಬಂದಾಗ ಸರ್ಕಾರಗಳು ಸುಮ್ಮನೆ ಕೂರುವುದು ಸರಿಯಲ್ಲ. ಅಡಿಕೆ ಹಾಳೆ ತಯಾರಿಕೆ ಮತ್ತು ಮಾರಾಟ ಉದ್ಯಮ ಇವತ್ತು ಲಕ್ಷ ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಅಸಂಖ್ಯ ಅಡಿಕೆ ಬೆಳೆಗಾರರಿಗೆ ಆದಾಯ ನೀಡುತ್ತಿದೆ. ದೇಶದ ಆರ್ಥಿಕ ವಹಿವಾಟಿಗೂ ಕಾರಣವಾಗಿದೆ. ಹಾಗಾಗಿ ಕೇಂದ್ರ-ರಾಜ್ಯ ಸರ್ಕಾರಗಳು ತಕ್ಷಣವೇ ಮಧ್ಯ ಪ್ರವೇಶಿಸಿ, ಈ ಉದ್ಯಮ ಉಳಿಸಬೇಕು.
- ವಿಶ್ವೇಶ್ವರಯ್ಯ, ಜಿಲ್ಲಾ ಕೈಗಾರಿಕಾ ಸಂಘ