SUDDILIVE || RIPPONPETE
ಗ್ರಾಮ ಒನ್ ಕೇಂದ್ರದಲ್ಲಿ ಸೇವೆಗಳಿಗೆ ಹೆಚ್ಚುವರಿ ಹಣ ವಸೂಲಿ ಆರೋಪ-ಅಧಿಕಾರಿಗಳ ಭೇಟಿ-Officials visit Grama One center, alleging extra charges for services
ಸಮಾಜದ ದುರ್ಬಲ ವರ್ಗದವರಿಗೆ ಸರ್ಕಾರಿ ಸೇವೆಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಗ್ರಾಮ ಒನ್ ಕೇಂದ್ರಗಳು ಕೆಲವೆಡೆ ಭ್ರಷ್ಟಾಚಾರದ ಕೂಪಗಳಾಗಿ ಮಾರ್ಪಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಆಘಾತಕಾರಿ ಘಟನೆಯೊಂದು ರಿಪ್ಪನ್ ಪೇಟೆ ಪಟ್ಟಣದ ಸಾಗರ ರಸ್ತೆಯ ಗ್ರಾಮ ಒನ್ ಕೇಂದ್ರದಲ್ಲಿ ಬೆಳಕಿಗೆ ಬಂದಿದ್ದು ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ರಫ಼ಿ ರಿಪ್ಪನ್ ಪೇಟೆ ಸ್ಥಳಕ್ಕೆ ತೆರಳಿ ಗ್ರಾಮ ಒನ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ನಂತರ ಸ್ಥಳಕ್ಕೆ ದೌಡಯಿಸಿದ ಉಪ ತಹಶೀಲ್ದಾರ್ ರವರಿಗೆ ಭ್ರಷ್ಟಾಚಾರದ ಕೂಪವಾಗಿರುವ ಈ ಗ್ರಾಮ ಒನ್ ಐಡಿಯನ್ನು ರದ್ದುಗೊಳಿಸುವಂತೆ ಮನವಿ ಸಲ್ಲಿಸಿರುವ ಘಟನೆ ನಡೆದಿದೆ.
ಪಟ್ಟಣದ ಬಡ ವೃದ್ದೆ ಬೀಬಿಜಾನ್ ಎಂಬುವವರು ಆಧಾರ್ ಕಾರ್ಡ್ ನ ನಂಬರ್ ಬದಲಾವಣೆಗೆ ಬಂದಿದ್ದಾಗ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ನಿಗದಿತ ಶುಲ್ಕ 50ರೂ ಪಡೆಯುವುದನ್ನು ಬಿಟ್ಟು ಹೆಚ್ಚುವರಿ 350 ರೂ ಹಣವನ್ನು ವಸೂಲಿ ಮಾಡಿದ್ದಾರೆ.ಹಾಗೇ ಇನ್ನೊಬ್ಬ ವ್ಯಕ್ತಿಯ ಪಾನ್ ಕಾರ್ಡ್ ಹೆಸರು ಬದಲಾವಣೆಗೆ 1000ರೂ ಕೇಳಿದ್ದರೆ , ಪಟ್ಟಣದ ನಿವಾಸಿ ಮುಸ್ತಫಾ ಎಂಬುವವರ ವೋಟರ್ ಐಡಿ ಹೆಸರು ಬದಲಾವಣೆಗೆ 150 ರೂ ಶುಲ್ಕ ಕೇಳಿರುವ ಬಗ್ಗೆ ಹಾಗೇಯೇ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಈ ಕೇಂದ್ರದ ಬಗ್ಗೆ ಹಲವಾರು ದೂರುಗಳು ಕೇಳಿಬಂದಿದೆ ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಕೂಡ ಈ ಬಗ್ಗೆ ಚರ್ಚೆಯಾಗಿತ್ತು.
ಈ ಬಗ್ಗೆ ಮಾಹಿತಿಯನ್ನಾಧರಿಸಿದ ಸಾಮಾಜಿಕ ಕಾರ್ಯಕರ್ತ ರಫ಼ಿ ರಿಪ್ಪನ್ ಪೇಟೆ ಬಡ ವೃದ್ದೆ ಹಾಗೂ ಇನ್ನಿಬ್ಬರು ಸಂತ್ರಸ್ಥರೊಂದಿಗೆ ಸಾಗರ ರಸ್ತೆಯ ಗ್ರಾಮ ಒನ್ ಕೇಂದ್ರಕ್ಕೆ ತೆರಳಿ ಸರ್ಕಾರಗಳು ಸಮಾಜದ ದುರ್ಬಲ ವರ್ಗದವರಿಗೆ ಸರ್ಕಾರಿ ಸೇವೆಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಹಮ್ಮಿಕೊಂಡು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಯತ್ನಿಸುತ್ತಿದೆ ಆದರೆ ನೀವು ಮಧ್ಯವರ್ತಿಗಳಿಗಿಂತ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು ನ್ಯಾಯವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಆರೋಪಕ್ಕೆ ಗ್ರಾಮ ಒನ್ ಸಿಬ್ಬಂದಿ ಸರಿಯಾಗಿ ಸ್ಪಂದಿಸದ ಕಾರಣ ಸ್ಥಳದಿಂದಲೇ ತಹಶೀಲ್ದಾರ್ ರಶ್ಮಿ ಹಾಲೇಶ್ ರವರಿಗೆ ಮಾಹಿತಿ ತಿಳಿಸಲಾಯಿತು.
ತಹಶೀಲ್ದಾರ್ ಸೂಚನೆ ಮೇರೆಗೆ ಉಪ ತಹಶೀಲ್ದಾರ್ ಗೌತಮ್ ಹಾಗೂ ರಾಜಸ್ವ ನಿರೀಕ್ಷಕರಾದ ಅಫ಼್ರೋಜ್ ಅಹಮದ್ ಸ್ಥಳಕ್ಕಾಗಮಿಸಿ ಸಂತ್ರಸ್ಥರ ಬಳಿ ಅಹವಾಲುಗಳನ್ನು ಆಲಿಸಿ ಗ್ರಾಮ ಒನ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾಗಲೇ ಅನಿರೀಕ್ಷಿತವಾಗಿ ಸ್ಥಳಕ್ಕಾಗಮಿಸಿದ ಮಹಿಳೆಯೊಬ್ಬರು ನನ್ನ ಮೂರು ಸೇವೆ ಗಳಿಗೆ 900 ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ ಈ ಬಗ್ಗೆ ಗ್ರಾಮ ಒನ್ ಸಿಬ್ಬಂದಿ ಉತ್ತರಿಸಲು ತಡಕಾಡಿದ ಪ್ರಸಂಗ ಕಂಡುಬಂದಿತು.
ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಉಪ ತಹಶೀಲ್ದಾರ್ ಗೌತಮ್ ಈ ಗ್ರಾಮ ಒನ್ ಕೇಂದ್ರದ ಮೇಲಿನ ಹೆಚ್ಚುವರಿ ಹಣ ವಸೂಲಿ ಆರೋಪ ಮೇಲ್ನೋಟಕ್ಕೆ ಸತ್ಯ ಎಂದು ತಿಳಿದುಬಂದಿದ್ದು ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಈ ಗ್ರಾಮ ಒನ್ ಕೇಂದ್ರದಲ್ಲಿ ಸರ್ಕಾರದ ನಿಯಮಾನುಸಾರ, ಪ್ರತಿ ಸೇವೆಗೂ ನಿಗದಿತ ಶುಲ್ಕವನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು. ಆದರೆ, ಈ ನಿಯಮವನ್ನು ಗಾಳಿಗೆ ತೂರಿ, ಅಮಾಯಕರ ಮತ್ತು ಬಡ ಮಹಿಳೆಯರ ಆಸಹಾಯಕತೆಯನ್ನು ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡಲಾಗಿದೆ ಎಂದು ತಿಳಿದುಬಂದಿದೆ. "ಗ್ರಾಮ ಒನ್ ಕೇಂದ್ರಗಳು ಬಡವರಿಗೆ ಆಶಾಕಿರಣವಾಗಬೇಕು. ಆದರೆ, ಇಂತಹ ಸಿಬ್ಬಂದಿಯ ವರ್ತನೆಯಿಂದ ಜನರಲ್ಲಿ ಸರ್ಕಾರದ ಮೇಲೆ ನಂಬಿಕೆ ಕಳೆದುಹೋಗುತ್ತದೆ. ಇದು ಅಕ್ಷಮ್ಯ ಅಪರಾಧ" ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.
ಇಂತಹ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಗ್ರಾಮ ಒನ್ ಕೇಂದ್ರಗಳ ಕಾರ್ಯವೈಖರಿಯನ್ನು ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕು.ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಹಾಗೂ ಗ್ರಾಮ ಒನ್ ನೋಡಲ್ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಬಡವರಿಗೆ ನ್ಯಾಯ ಒದಗಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
Officials visit Grama One center