SUDDILIVE || SHIVAMOGGA
ಶಿವಮೊಗ್ಗದ ಅಭಿವೃದ್ಧಿಗೆ ಸೂಡಾದಿಂದ 'ಮಾಸ್ಟರ್ ಪ್ಲಾನ್'-'Master Plan' from Suda for the development of Shivamogga
2041ರ ಹೊತ್ತಿಗೆ ಇರಬಹುದಾದ ಶಿವಮೊಗ್ಗ-ಭದ್ರಾವತಿಯ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ನಗರಾಭಿವೃಧ್ಧಿ ವ್ಯಾಪ್ತಿಯಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಮಹಾಯೋಜನೆ ಸಿದ್ಧಪಡಿಸಲು ಉದ್ದೇಶಿಸಲಾಗಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಮಲೆನಾಡು ಭಾಗದ ಪ್ರಮುಖ ನಗರವಾಗಿರುವ ಶಿವಮೊಗ್ಗ ಜಿಲ್ಲೆ ಹಿಂದೆಂದಿಗಿಂತ ಹೆಚ್ಚು ವೇಗವಾಗಿ ಅಭಿವೃದ್ಧಿಪಥದತ್ತ ದಾಪುಗಾಲಿಡುತ್ತಿದೆ. ಇಂತಹ ವಿಶೇಷ ಸಂದರ್ಭದಲ್ಲಿ ಜಿಲ್ಲಾ ಕೇಂದ್ರವನ್ನು ಮುಂದಿನ ಕೆಲವು ದಶಕಗಳಲ್ಲಿ ಹೆಚ್ಚಾಗುವ ಜನಸಂಖ್ಯೆಯನ್ನಾಧರಿಸಿ, ಅಂದಿನ ಜನಸಂಖ್ಯೆ, ವಾಹನ ದಟ್ಟಣೆ, ಆಸ್ಪತ್ರೆ, ಶಾಲಾ-ಕಾಲೇಜುಗಳು, ಕೆರೆ-ಕಾಲುವೆಗಳು, ಸಂಪರ್ಕ ರಸ್ತೆಗಳು, ಉದ್ಯಾನವನಗಳು, ಒಟ್ಟಾರೆ ನಗರದ ಸೌಂದರ್ಯ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ಕ್ರಿಯಾಯೋಜನೆ ರೂಪಿಸಲು ಉದ್ದೇಶಿಸಲಾಗಿದೆ ಎಂದವರು ನುಡಿದರು.
ಈ ಸಂಬಂಧ ಈಗಾಗಲೇ ಸಂಬಂಧಿತ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ, ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ 2 ಹಂತದ ಸಭೆಯನ್ನು ಆಯೋಜಿಸಿ, ವಿಸ್ತೃತವಾಗಿ ಸಮಾಲೋಚನೆ ನಡೆಸಲಾಗಿದೆ. ಇಂದೂ ಮಧ್ಯಾಹ್ನ ಇಂಜಿನಿಯರ್ಅಸೋಸಿಯೇಷನ್ನ ಪದಾಧಿಕಾರಿಗಳು ಹಾಗೂ ಡೆವಲಪರ್ಸ್ಅವರ ಉಪಸ್ಥಿತಿಯಲ್ಲಿ ಸಮಾಲೋಚನೆ ನಡೆಸಿ, ಸಂಘಟನೆಗಳ ಸದಸ್ಯರ ಅಭಿಪ್ರಾಯವನ್ನು ಸಹ ಆಲಿಸಿ, ಅಗತ್ಯವಿದ್ದಲ್ಲಿ ಯೋಜನಾ ಕಾರ್ಯದಲ್ಲಿ ಅಳವಡಿಸಿಕೊಳ್ಳಲಾಗುವುದು. ಅಲ್ಲದೇ ನಗರದ ಸಾರ್ವಜನಿಕರು ತಾವು ಗುರುತಿಸಿ, ಪ್ರಾಧಿಕಾರಕ್ಕೆ ತಂದಿರುವ ನ್ಯೂನ್ಯತೆ, ಮತ್ತಿತರ ವಿಷಯಗಳನ್ನು ಮುಕ್ತವಾಗಿ ಸ್ವೀಕರಿಸಲಾಗಿದೆ ಎಂದರು.
ಪ್ರಸ್ತಾಪಿತ ಕ್ರಿಯಾಯೋಜನೆಯಲ್ಲಿ ನಗರಕ್ಕೆ ಹೊಂದಿಕೊಂಡಂತಿರುವ ಆಯ್ದ 3-4 ಸ್ಥಳಗಳಲ್ಲಿ ಆಸ್ಪತ್ರೆಗಳಿಗಾಗಿ ನಿವೇಶನವನ್ನು ಕಾಯ್ದಿರಿಸಲಾಗಿದೆ. ಕೈಗಾರಿಕಾ ಕ್ಷೇತ್ರದ ವಿಸ್ತರಣೆಗಾಗಿ 100ಎಕರೆ ಭೂಪ್ರದೇಶವನ್ನು ಕಾಯ್ದಿರಿಸಲೂ ಸಹ ಉದ್ದೇಶಿಸಲಾಗಿದೆ. ನಗರದಲ್ಲಿನ ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವರ್ತುಲ ರಸ್ತೆಗಳ ನಿರ್ಮಾಣ, ಪ್ರವಾಸೋದ್ಯಮ ಕ್ಷೇತ್ರದ ಉನ್ನತಿಗೆ ನೀಲನಕ್ಷೆಯಲ್ಲಿ ಸ್ಥಾನ ಕಲ್ಪಿಸಿಕೊಳ್ಳಲಾಗಿದೆ ಅಲ್ಲದೇ ಬಂಡವಾಳ ಹೂಡಿಕೆಗಾಗಿ ಜಿಲ್ಲೆಗೆ ಆಗಮಿಸುವವರಿಗೆ ಅನುಕೂಲ ಕಲ್ಪಿಸಲು ಸಹ ಕ್ರಮವಹಿಸಲಾಗಿದೆ ಎಂದರು.
ಅಲ್ಲದೇ ಭಾರೀ ವಾಹನಗಳ ನಿಲುಗಡೆಗೆ ಅನುಕೂಲವಾಗುವಂತೆ ನಗರದ ಹೊರವಲಯದ ವಿಶಾಲವಾದ ಪ್ರದೇಶದಲ್ಲಿ ವ್ಯವಸ್ಥಿತವಾದ ಟ್ರಕ್ಟರ್ಮಿನಲ್ನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಕ್ರಿಯಾ ಯೋಜನೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ನೀಡುವ ಸಲಹೆಯನ್ನು ಪ್ರಾಧಿಕಾರ ಮುಕ್ತವಾಗಿ ಸ್ವೀಕರಿಸಲಿದೆ ಎಂದರು.
ಪ್ರಸ್ತುತ 4-5ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಸೂಡಾ ವ್ಯಾಪ್ತಿಯಲ್ಲಿನ ಆಯ್ದ ನಾಲ್ಕು ಕೆರೆಗಳನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಟೆಂಡರ್ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರದಲ್ಲಿ ಕೆರೆಗಳ ಅಭಿವೃಧ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದ ಅವರು, ಸುಮಾರು 120ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಗರದ ಹೊರವಲಯ ಊರುಗಡೂರು ಪ್ರದೇಶದಲ್ಲಿ ಸುಸಜ್ಜಿತವಾದ ಗ್ರಾಹಕರಿಗೆ ಕೈಗೆಟುವ ದರದಲ್ಲಿ ಅಪಾರ್ಟ್ಮೆಂಟ್ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. 2BHK ವಸತಿ ಗೃಹಗಳಿಗೆ 38ಲಕ್ಷ ಹಾಗೂ 3BHK ವಸತಿಗೃಹಗಳಿಗೆ 50-55ಲಕ್ಷ ರೂ.ಗಳನ್ನು ನಿಗಧಿಪಡಿಸಲಾಗಿದೆ ಎಂದರು.
ಸೂಡಾ ವತಿಯಿಂದ ಗೋಪಶೆಟ್ಟಿಕೊಪ್ಪದಲ್ಲಿ ಈಗಾಗಲೇ ವಶಪಡಿಸಿಕೊಂಡಿರುವ 104ಎಕರೆ ಭೂಪ್ರದೇಶದಲ್ಲಿ ಅನುಮತಿ ನೀಡಿ, ರೈತರು ಒಡಂಬಡಿಕೆ ಮಾಡಿಕೊಂಡಿರುವ 30ಎಕರೆ ಭೂಪ್ರದೇಶವನ್ನು ಶೀಘ್ರದಲ್ಲಿ ಅಭಿವೃದ್ಧಿಪಡಿಸಲಾಗುವುದು. ಅಲ್ಲದೇ ಉಳಿದ ಭೂಪ್ರದೇಶದ ಅಭಿವೃದ್ಧಿಗೂ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ನಿಧಿಗೆ ಮತ್ತು ಸೋಮಿನಕೊಪ್ಪ ಪ್ರದೇಶದಲ್ಲಿಯೂ ಬಡಾವಣೆಗಳನ್ನು ಸೃಜಿಸಿ, ನಿವೇಶನಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿಶ್ವನಾಥ ಮುದ್ದಜ್ಜಿ, ನಿರ್ದೇಶಕರಾದ ಸಿದ್ದಪ್ಪ, ಪ್ರವೀಣ್ಕುಮಾರ್ಮತ್ತಿತರರು ಉಪಸ್ಥಿತರಿದ್ದರು.
'Master Plan' from Suda for the development of Shivamogga