ad

ಸೊರಬದಲ್ಲಿ ನಡೆದ RSS ಪಥಸಂಚಲನ-RSS procession held in Soraba

SUDDILIVE || SORABA

ಸೊರಬದಲ್ಲಿ ನಡೆದ RSS ಪಥಸಂಚಲನ-RSS procession held in Soraba 

RSS, soraba

ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನ ಪೂರೈಸಿದ ಹಾಗೂ ವಿಜಯದಶಮಿಯ ಹಿನ್ನೆಲೆಯಲ್ಲಿ ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಭಾನುವಾರ ನಡೆದ ಪಥಸಂಚಲನ ಯಶಸ್ವಿಯಾಗಿ ನೆರವೇರಿತು. 

ಚಂದ್ರಗುತ್ತಿ ರಸ್ತೆಯ ಶ್ರೀ ಗಿರಿಜಾಶಂಕರ ಸಭಾಭವನದಿಂದ ಆರಂಭವಾದ ಪಥಸಂಚಲನ ಶ್ರೀ ಬ್ರಹ್ಮರ್ಷಿ ನಾರಾಯಣಗುರು ವೃತ್ತ, ಶ್ರೀ ಸ್ವಾಮಿವಿವೇಕಾನಂದ ವೃತ್ತ, ಹೊಸಬಾಳೆ ರಸ್ತೆ, ಸಂಜೀವ ನಗರದ ಮೂಲಕ ಪುನಃ ಗಿರಿಜಾಶಂಕರ ಸಭಾಭವನ ತಲುಪಿತು. ಪ್ರಮುಖ ವೃತ್ತಗಳಲ್ಲಿ ಆರ್‌ಎಸ್‍ಎಸ್ ಬ್ಯಾನರ್, ಕೇಸರಿ ಧ್ವಜಗಳು ಹಾಗೂ ಬೃಹತ್ ಪ್ಲೆಕ್ಸ್‌ಗಳು ಆಕರ್ಷಣೆಯಾಗಿತ್ತು. ಹೊಸಪೇಟೆ ಬಡಾವಣೆಯ ಮುಖ್ಯ ರಸ್ತೆಗಳು ಕೇಸರಿಮಯವಾಗಿದ್ದವು. ಸುಮಾರು ಒಂದು ಸಾವಿರಕ್ಕೂ ಅಧಿಕ ಗಣವೇಷಧಾರಿಗಳು ಪಾಲ್ಗೊಂಡಿದ್ದರು. ಪಥಸಂಚಲನ ಸಾಗುವ ಮಾರ್ಗದ ರಸ್ತೆಗಳಲ್ಲಿ ಮಹಿಳೆಯರು ರಂಗೋಲಿ ಬಿಡಿಸಿ, ಭಗವಾಧ್ವಜಕ್ಕೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಇನ್ನು ಮಳೆಯನ್ನೂ ಲೆಕ್ಕಿಸದೇ ಗಣವೇಷಧಾರಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು.  


ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಆರ್‌ಎಸ್‍ಎಸ್ ಶಿವಮೊಗ್ಗ ವಿಭಾಗ ವ್ಯವಸ್ಥಾ ಪ್ರಮುಖ್ ಲೋಹಿತಾಶ್ವ ಕೇದಿಗೆರೆ ಬೌದ್ಧಿಕ್ ನೀಡಿ, ದೇಶದ ರಕ್ಷಣೆ ಮತ್ತು ಧರ್ಮ ಸಂರಕ್ಷಣೆ ಆರ್‌ಎಸ್‍ಎಸ್ ಮೂಲ ಧ್ಯೇಯವಾಗಿದೆ. ದೇಶ ಮತ್ತು ಭಾರತಾಂಭೆಯನ್ನು ಪೂಜಿಸುವ ಹಾಗೂ ಗೌರವಿಸುವ ಪ್ರತಿಯೊಬ್ಬರೂ ಹಿಂದೂಗಳೇ ಆಗಿದ್ದಾರೆ. ಪ್ರಸ್ತುತ ದೇಶ ಭಕ್ತ ಸಂಘಟನೆಯ ಮೇಲೆ ಅನೇಕ ತೊಡಕುಗಳನ್ನು ತಂದರೂ ಸಂಘಕ್ಕೆ ಯಾವುದೇ ಹಿನ್ನೆಡೆಯಾಗಿಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಸಂಘದ ಕಾರ್ಯಚಟುವಟಿಗಳು ನಡೆದುಕೊಂಡು ಬಂದಿದೆ. ಕೆಲವರು ಸ್ವಾತಂತ್ರ್ಯಕ್ಕಾಗಿ ಆರ್‌ಎಸ್‍ಎಸ್ ಕೊಡುಗೆ ಏನು ಎಂದು ಪ್ರಶ್ನಿಸುತ್ತಾರೆ. ಅವರಿಗೆ ನೈಜ ಇತಿಹಾಸವನ್ನು ಹಾಗೂ ಸಂಘದ ಕಾರ್ಯಕರ್ತರು ಅನುಭವಿಸಿದ ಸೆರೆಮನೆ ವಾಸ ಮತ್ತು ತ್ಯಾಗ ಬಲಿದಾನದ ಬಗ್ಗೆ ಅರಿಯಬೇಕಿದೆ ಎಂದರು. 

ದೇಶದಲ್ಲಿ ಕೋವಿಡ್ ವ್ಯಾಪಿಸಿದ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು ಲೆಕ್ಕಿಸದೇ ಸಂಘದ ಸ್ವಯಂ ಸೇವಕರು ಕಾರ್ಯನಿರ್ವಹಿಸಿದ್ದಾರೆ. ಮಾತ್ರವಲ್ಲದೇ, ಬರಗಾಲ, ಅತಿವೃಷ್ಟಿ ಮತ್ತು ಅನಾವೃಷ್ಟಿಗಳಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಂಘದ ಸ್ವಯಂಸೇವಕರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹವಾಮಾನದ ವೈಪರಿತ್ಯಕ್ಕೆ ನಮ್ಮಗಳ ಜೀವನ ಶೈಲಿಯ ಬದಲಾವಣೆಗಳು ಕಾರಣವಾಗಿದ್ದು, ಪರಿಸರ ರಕ್ಷಣೆಗೆ ಒತ್ತು ನೀಡುವ ಮೂಲಕ ಪರಿಸರ ಸ್ನೇಹಿಯಾಗಿ ಬದುಕುವುದನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಸಂವಿಧಾನದ ರಕ್ಷಣೆ ಮತ್ತು ಗೌರವ ನೀಡುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ. ದ್ವಿಚಕ್ರ ವಾಹನಗಳ ಚಾಲನೆ ವೇಳೆ ಹೆಲ್ಮೆಟ್ ಧರಿಸಬೇಕು. ಇದು ಕೇವಲ ಕಾನೂನು ಪಾಲನೆಗೆ ಮಾತ್ರವಲ್ಲ. ಬದಲಿಗೆ ಜೀವ ರಕ್ಷಣೆಗೆ ಎನ್ನುವುದನ್ನು ತಿಳಿಯಬೇಕು. ಸಾಮಾಜಿಕ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. 

ಆರ್‌ಎಸ್‍ಎಸ್ ಜಿಲ್ಲಾ ಸಂಘಚಾಲಕ್ ಕೇಶವ ಸಂಪೇಕೈ, ತಾಲೂಕು ಸಂಘಚಾಲಕ್ ನಾಗರಾಜ ಗುತ್ತಿ ವೇದಿಕೆಯಲ್ಲಿದ್ದರು. ಸಂಘದ ಹಿರಿಯರಾದ ರಾಜಾರಾಮ್ ಹೊರಬೈಲುಕೊಪ್ಪ, ಅಚ್ಯುತರಾವ್ ಹರೀಶಿ, ಪ್ರಮುಖರಾದ ಎಚ್.ಎಸ್. ಮಂಜಪ್ಪ, ಪದ್ಮನಾಭ ಭಟ್, ಜಾನಕಪ್ಪ ಒಡೆಯರ್, ಸಿ.ಪಿ. ವೀರೇಶ್‍ಗೌಡ, ಡಾ. ಎಚ್.ಇ. ಜ್ಞಾನೇಶ್, ಈಶ್ವರ ಚನ್ನಪಟ್ಟಣ, ಸುಧಾಕರ ಭಾವೆ, ದೇವೇಂದ್ರಪ್ಪ ಚನ್ನಾಪುರ, ಬೆನವಪ್ಪ, ಸಂಜೀವ ಆಚಾರ್, ಮೋಹನ್ ಹಿರೇಶಕುನ, ವಿಹಿಂಪ, ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಇದ್ದರು. ಸಂಘದ ತಾಲೂಕು ಕಾರ್ಯವಾಹ ಸೋಮಪ್ಪ ಕಾರೇಕೊಪ್ಪ ಸ್ವಾಗತಿಸಿ, ಮಹೇಶ ಗೋಖಲೆ ವಂದಿಸಿದರು.

RSS procession held in Soraba

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close