ಚಂದ್ರಗುತ್ತಿಯಲ್ಲಿ ಬನದ ಹುಣ್ಣಿಮೆ ಜಾತ್ರೆ - Banada Hunnime jathra in Chandragutti

 SUDDILIVE || SHIVAMOGGA

ಚಂದ್ರಗುತ್ತಿಯಲ್ಲಿ ಬನದ ಹುಣ್ಣಿಮೆ ಜಾತ್ರೆ - Banada Hunnime jathra in Chandragutti    

Banada, Hunnime

ಚಂದ್ರಗುತ್ತಿಯ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಗ್ರಾಮದ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಬನದ ಹುಣ್ಣಿಮೆ ನಿಮಿತ್ತ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಬನದ ಹುಣ್ಣಿಮೆಮ ಅಂಗವಾಗಿ ಬೆಳಗ್ಗೆಯಿಂದಲೇ ದೇವಸ್ಥಾನದ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕಣ್ಣು ಹಾಯಿಸಿದಲ್ಲೆಲ್ಲಾ ಭಕ್ತರ ಸಾಗರವೇ ಕಂಡುಬಂದಿತು. 

ಸಾವಿರಾರು ಭಕ್ತರು ಪಡ್ಲಿಗೆಯಲ್ಲಿ ದೇವಿಯ ರೂಪದ ಮೂರ್ತಿಯನ್ನು ಭಕ್ತಿಯಿಂದ ಶಿರದ ಮೇಲೆ ಹೊತ್ತು, ಸಾಲು ಸಾಲಾಗಿ ದೇಗುಲದ ಮೆಟ್ಟಿಲುಗಳನ್ನು ಏರುತ್ತಾ ಉಧೋ, ಉಧೋ... ರೇಣುಕಾ ಯಲ್ಲಮ್ಮ ನಿನ್ನಾಲ್ಕು ಉಧೋ, ಉಧೋ...ಎಂಬ ಘೋಷಣೆಗಳನ್ನು ಮೊಳಗಿಸಿದರು. ಈ ಭಕ್ತಿಯ ಜಯಘೋಷಗಳು ಗುತ್ತಿಯ ಬೆಟ್ಟದಾದ್ಯಂತ ಪ್ರತಿಧ್ವನಿಸಿದವು. ಇಷ್ಟಾರ್ಥ ಸಿದ್ಧಿಗಾಗಿ ಅನೇಕ ಭಕ್ತರು ರಸ್ತೆಯುದ್ದಕ್ಕೂ ದೀಡ್ ನಮಸ್ಕಾರ ಹಾಕುವ ಮೂಲಕ ತಮ್ಮ ಹರಕೆಯನ್ನು ಸಮರ್ಪಿಸಿದರು. 

ಹೊಸ್ತಿಲು ಹುಣ್ಣಿಮೆಯಲ್ಲಿ ಒಂದು ತಿಂಗಳ ಕಾಲ ದೇವಿಯು ವೈಧವ್ಯದಲ್ಲಿ ಇರುತ್ತಾರೆ, ಎಂಬ ಸಂಪ್ರದಾಯದ ಹಿನ್ನೆಲೆಯಲ್ಲಿ ಭಕ್ತರು ಹಸಿರು ಬಳೆ, ಕುಪ್ಪಸ ಹಾಗೂ ಪಡ್ಲಿಗೆ ತುಂಬುವುದು ಹಾಗೂ ಮುತ್ತೈದೆ ಸಾಮಗ್ರಿಗಳನ್ನು ಪೂಜೆಗೆ ಸಲ್ಲಿಸುವಂತಿರಲಿಲ್ಲ. ಆದರೆ ಬನದ ಹುಣ್ಣಿಮೆಯು ಮುತ್ತೈದೆಯರ ಹುಣ್ಣಿಮೆ ಎಂದು ಪ್ರಸಿದ್ಧಿ ಪಡೆದಿದ್ದು ಸಾವಿರಾರು ಮಹಿಳಾ ಭಕ್ತರು ಸಡಗರ ಸಂಭ್ರಮದಿಂದ ಹೊಸ ಹಸಿರು ಬಳೆಗಳನ್ನು ತೊಟ್ಟು ಪಡ್ಲಿಗೆ ತುಂಬಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಿದರು. ದೇವಿಯ ಹೆಸರಿನಲ್ಲಿ ವಿಶೇಷ  ಖಾದ್ಯಗಳನ್ನು ತಯಾರಿಸಿ ಶ್ರೀ ದೇವಿಗೆ ನೈವೇದ್ಯವಾಗಿ ಅರ್ಪಿಸಿ ನಂತರ ಬಂಧು- ಬಳಗದೊಂದಿಗೆ  ಭೋಜನ ಮಾಡುವ ದೃಶ್ಯ ಕಂಡು ಬಂದಿತು. 

Banada, Hunnime

ದೇವಸ್ಥಾನದ ಆವರಣದಲ್ಲಿರುವ ಪರಿವಾರ ದೇವರುಗಳಾದ ಕಾಲಭೈರವ, ನಾಗದೇವತೆ, ಮಾತಂಗಿ, ಪರಶುರಾಮ ಹಾಗೂ ತ್ರಿಶೂಲದ ಭೈರಪ್ಪ ದೇವರುಗಳಿಗೆ ವಿಶೇಷ ಪೂಜೆ ನೆರವೇರಿದವು. ದೇವಸ್ಥಾನದಿಂದ ಪ್ರಾರಂಭವಾದ ಶ್ರೀ ರೇಣುಕಾಂಬ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆಯು ಸಕಲ ವಾದ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ವಿಜೃಂಭಣೆಯಿಂದ ಜರುಗಿತು. ಶಿವಮೊಗ್ಗ ಸೇರಿದಂತೆ ಹಾವೇರಿ, ಧಾರವಾಡ,  ಬೆಳಗಾವಿ, ದಾವಣಗೆರೆ, ರಾಯಚೂರು, ಚಿತ್ರದುರ್ಗ ಮತ್ತು ಉತ್ತರ ಕರ್ನಾಟಕ ಹಾಗೂ ಬಯಲು ಸೀಮೆ ಭಾಗಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು. ಭಾರಿ ಜನದಟ್ಟಣೆಯ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆಯಿಂದ ಕ್ಷೇತ್ರದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

Banada Hunnime jathra in Chandragutti

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close