SUDDILIVE || SHIVAMOGGA
ಕಾಡಾ ಕಚೇರಿಯನ್ನ ವಿಶ್ವೇಶ್ವರಯ್ಯ ಜಲಮಂಡಳಿಗೆ ಹಸ್ತಾಂತರಿಸದಂತೆ ರೈತ ಸಂಘ ಆಗ್ರಹ-Farmers' association demands not to hand over KADA office to Visvesvaraya Water Board
ಕರ್ನಾಟಕ ನೀರಾವರಿ ನಿಗಮ ತುಂಗ ಮೇಲ್ದಂಡೆ ವಲಯದಲ್ಲಿರುವ ಭದ್ರಾ ಅಣೆಕಟ್ಟು ಮತ್ತು ಅಚ್ಚುಕಟ್ಟು ಪ್ರದೇಶದ (ಭದ್ರಾ ಯೋಜನಾ ವೃತ್ತ) ಆಡಳಿತವನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಹಸ್ತಾಂತರಿಸಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷರಾದ ಎಚ್,ಆರ್ ಬಸವರಾಜಪ್ಪ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಜಲಾಶಯ ತರೀಕೆರೆ ಲಕ್ಕವಳ್ಳಿ ಗ್ರಾಮದ ಬಳಿ ಸಮುದ್ರ ಮಟ್ಟದಿಂದ ಸರಾಸರಿ 601 ಮೀಟರ್ ಎತ್ತರದಲ್ಲಿ ಭದ್ರಾ ನದಿಗೆ ಅಡಲಾಗಿ ಕಟ್ಟಲಾಗಿದೆ. ಜಲಾಶಯದ ಸಂಗ್ರಹಣಾ ಸಾಮರ್ಥ್ಯ 71.531 ಟಿ.ಎಂ.ಸಿ. ಈ ಜಲಾಶಯದಿಂದ 1965ನೇ ಸಾಲಿನಿಂದ ಕಾಲುವೆಗಳಲ್ಲಿ ನೀರನ್ನು ಹರಿಸಲಾಗಿದೆ.
ಈ ಯೋಜನೆಯಿಂದ 2,53,292ಎಕರೆಗಳಿಗೆ ಶಿವಮೊಗ್ಗ, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ರೈತರಿಗೆ 2 ಬೆಳೆಗಳಿಗೆ ನೀರು ಕೊಡಲಾಗುತ್ತಿದೆ. ಜೊತೆಗೆ ನದಿ ಮುಖಾಂತರ, ಕಾಲುವೆ ಮುಖಾಂತರ ಜಲಾಶಯದಿಂದ ಕುಡಿಯುವ ನೀರು, ಕೈಗಾರಿಕೆಗಳಿಗೆ ಸಹ ನೀರು ಹಂಚಿಕೆ ಮಾಡಲಾಗಿದೆ. ಈ ಜಲಾಶಯಕ್ಕೆ ಸಂಬಂಧ ಪಟ್ಟಂತೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸಹ ಇದ್ದು ಅಚ್ಚಕಟ್ಟು ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ ಎಂದರು.
ಭದ್ರಾ ನೀರಾವರಿ ಯೋಜನಾ ವೃತ್ತದಿಂದ ರೈತರಿಗೆ ಅನುಕೂಲಕರವಾಗುವ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಈ ಯೋಜನಾ ವೃತ್ತವನ್ನು ಕರ್ನಾಟಕ ನೀರಾವರಿ ನಿಗಮದಿಂದ ಬೇರ್ಪಡಿಸಿ ವಿಶ್ವೇಶ್ವರಯ್ಯ ಜಲ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಹಸ್ತಾಂತರಿಸುವುದಾಗಿ ತಿಳಿದು ಬಂದಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಈ ಭಾಗದ ರೈತರು ಒಪ್ಪುವುದಿಲ್ಲ. ಈ ಯೋಜನಾ ವೃತ್ತವನ್ನು ಹಸ್ತಾಂತರ ಮಾಡದೇ ಈಗಿರುವ ಹಾಗೆಯೇ ಆಡಳಿತ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ, ದಾವಣಗೆರೆ, ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವರುಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು ಎಲ್ಲಾ ಜನ ಪ್ರತಿನಿಧಿಗಳು ಒಕ್ಕೊರಲಿನಿಂದ ಉಳಿಸಬೇಕಾಗಿ ಕೋರುತ್ತೇನೆ. ಇಲ್ಲದಿದ್ದಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು, ಜನಪ್ರತಿನಿಧಿಗಳು ಸೇರಿದಂತೆ ಸರ್ಕಾರದ ವಿರುದ್ಧ ಚಳುವಳಿಯ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂದು ಈ ಮೂಲಕ ತಿಳಿಸುತ್ತಿದ್ದೆವೆ ಎಂದರು.
Farmers' association demands not to hand over KADA office to Visvesvaraya Water Board

