SUDDILIVE || SHIVAMOGGA
ಮರಕ್ಕೆ ಕಾರು ಡಿಕ್ಕಿ ಹೊಡೆದು 21 ವರ್ಷದ ಯುವಕ ಸಾವು; ಕಾರಿನ ಮಾಲೀಕತ್ವದ ಬಗ್ಗೆ ಕುತೂಹಲ-21-year-old dies after car hits tree; curiosity over car's ownership
![]() |
| ಕಾರು ಈ ಮರಕ್ಕೆ ಡಿಕ್ಕಿ ಹೊಡೆದು ಇಬ್ಭಾಗವಾಗಿದೆ. |
ಶಿವಮೊಗ್ಗ: ನಗರದ ಹೊರವಲಯದ ಹರಿಗೆ ಡೌನ್ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 21 ವರ್ಷದ ಯುವಕ ಮೃತಪಟ್ಟಿರುವ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸೀಗೆಹಟ್ಟಿ ನಿವಾಸಿ ಗುರುರಾಜ್ (21) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.
ಲಭ್ಯ ಮಾಹಿತಿಯ ಪ್ರಕಾರ, ಮಧ್ಯರಾತ್ರಿ ವೇಳೆ ಶಿವಮೊಗ್ಗ–ಭದ್ರಾವತಿ ರಸ್ತೆಯಲ್ಲಿ ಸಾಗುತ್ತಿದ್ದ ಹೋಂಡಾ ಸಿಟಿ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಭಾರೀ ವೇಗದಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಎರಡು ಭಾಗವಾಗಿದೆ. ಚಾಲಕ ಗುರುರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರಿನ ಮಾಲೀಕತ್ವದ ಬಗ್ಗೆಯೂ ಕುತೂಹಲ ಮೂಡಿಸಿದೆ. ವಾಹನ ನಗರದ ಪ್ರತಿಷ್ಠಿತ ರಾಜಕೀಯ ವ್ಯಕ್ತಿಯ ಕುಟುಂಬದವರ ಹೆಸರಿನಲ್ಲಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆದರೆ ಈ ವಾಹನ ಮೃತ ಯುವಕನ ಬಳಿಗೆ ಹೇಗೆ ಬಂದಿತು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮೂಲಗಳ ಮಾಹಿತಿ ಪ್ರಕಾರ, ಗುರುರಾಜ್ ಇತ್ತೀಚೆಗಷ್ಟೇ ಈ ಸೆಕೆಂಡ್ಹ್ಯಾಂಡ್ ಹೋಂಡಾ ಸಿಟಿ ಕಾರನ್ನು ಖರೀದಿಸಿದ್ದರು ಎನ್ನಲಾಗುತ್ತಿದೆ. ಆದರೆ ವಾಹನದ ಮಾಲೀಕತ್ವ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿತ್ತೇ, ದಾಖಲೆಗಳು ಯಾರ ಹೆಸರಿನಲ್ಲಿದ್ದವು ಎಂಬುದು ಸೇರಿದಂತೆ ಎಲ್ಲ ವಿವರಗಳು ಪೊಲೀಸ್ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.
ಮೃತ ಗುರುರಾಜ್ ಆಟೋ ಹಾಗೂ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಘಟನೆ ಕುರಿತು ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಅಪಘಾತದ ನಿಖರ ಕಾರಣ, ವಾಹನದ ಮಾಲೀಕತ್ವ ಹಾಗೂ ಇತರೆ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
21-year-old dies after car hits tree; curiosity over car's ownership





