SUDDILIVE || SHIVAMOGGA
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ: ಶಿವಮೊಗ್ಗದಲ್ಲಿ ಬ್ಯಾಂಕ್ಗಳು ಬಂದ್, ಎಟಿಎಂಗಳತ್ತ ಗ್ರಾಹಕರ ದೌಡು- Nationwide bank strike: Banks closed in Shivamogga, customers rush to ATMs
ಶಿವಮೊಗ್ಗ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU)ಗೆ ಸೇರಿದ ಏಳು ಪ್ರಮುಖ ಬ್ಯಾಂಕ್ ನೌಕರರ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಒಂದು ದಿನದ ಮುಷ್ಕರದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲೂ ಶುಕ್ರವಾರ ಬ್ಯಾಂಕ್ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ.
AIBEA, AIBOC, NCBE, AIBOA, BEFI, INBEF ಹಾಗೂ INBOC ಸಂಘಟನೆಗಳ ಸದಸ್ಯರು ಮುಷ್ಕರದಲ್ಲಿ ಭಾಗವಹಿಸಿದ್ದು, ಬ್ಯಾಂಕ್ ಶಾಖೆಗಳು ಹಾಗೂ ಕಚೇರಿಗಳ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ. ಇದರಿಂದ ಬ್ಯಾಂಕ್ಗೆ ಆಗಮಿಸಿದ ಗ್ರಾಹಕರು ವಹಿವಾಟು ನಡೆಸಲು ಸಾಧ್ಯವಾಗದೆ ಪರದಾಡುವಂತಾಗಿದೆ.
ಮುಷ್ಕರದ ಪರಿಣಾಮ ಎಟಿಎಂಗಳಲ್ಲಿ ಹಣ ಪಡೆಯಲು ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಶಿವಮೊಗ್ಗದ ಸವಳಂಗ ರಸ್ತೆಯ ಕೆನರಾ ಬ್ಯಾಂಕ್ ಪಕ್ಕದಲ್ಲಿರುವ ಎಟಿಎಂಗಳಲ್ಲಿ ಗ್ರಾಹಕರು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂತು. ಇಂದಿನಿಂದ ನಾಲ್ಕು ದಿನಗಳು ಬ್ಯಾಂಕ್ ಬಂದ್ ಆಗಿವೆ.
5 ದಿನಗಳ ಬ್ಯಾಂಕಿಂಗ್ ಜಾರಿಗೆ ಆಗ್ರಹ
ಮುಷ್ಕರದ ಹಿನ್ನೆಲೆಯಲ್ಲಿ ಬ್ಯಾಂಕ್ ನೌಕರರೊಬ್ಬರು ಮಾತನಾಡಿ, ಇದು ಅನಿರ್ದಿಷ್ಟ ಮುಷ್ಕರವಲ್ಲ, ಒಂದು ದಿನದ ಮುಷ್ಕರ ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯವಾಗಿ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. 2015ರಿಂದಲೇ ಈ ಬೇಡಿಕೆ ಬಾಕಿ ಉಳಿದಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್ಗಳಿಗೆ ರಜೆ ಇದ್ದು, ಮೊದಲ ಮತ್ತು ಮೂರನೇ ಶನಿವಾರವೂ ರಜೆ ನೀಡುವ ಮೂಲಕ ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ನೌಕರರ ಒತ್ತಾಯವಾಗಿದೆ.
ಮೊದಲ ಹಾಗೂ ಮೂರನೇ ಶನಿವಾರ ರಜೆ ನೀಡಿದರೆ, ಅದಕ್ಕೆ ಪರ್ಯಾಯವಾಗಿ ವಾರದ ಇತರ ದಿನಗಳಲ್ಲಿ ಕೆಲಸದ ಅವಧಿಯನ್ನು ಹೆಚ್ಚಿಸುವ ವ್ಯವಸ್ಥೆ ಮಾಡಬಹುದೆಂದು ಈ ಹಿಂದೆ ಒಪ್ಪಿಗೆ ನೀಡಲಾಗಿತ್ತು. ಪ್ರತಿದಿನ ಸುಮಾರು ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡುವ ಮೂಲಕ ಎರಡು ಶನಿವಾರಗಳ ರಜೆಯನ್ನು ಸರಿದೂಗಿಸುವ ಪ್ರಸ್ತಾವನೆಯೂ ಇತ್ತು. ಆದರೆ, ಈ ವ್ಯವಸ್ಥೆ ಇದುವರೆಗೂ ಜಾರಿಯಾಗಿಲ್ಲ ಎಂದು ಬ್ಯಾಂಕ್ ನೌಕರರು ತಿಳಿಸಿದ್ದಾರೆ.
ಗ್ರಾಹಕರಿಗೆ ತಾತ್ಕಾಲಿಕ ತೊಂದರೆ
ಬ್ಯಾಂಕ್ ಮುಷ್ಕರದಿಂದ ಶಾಖೆಗಳಲ್ಲಿ ನಗದು ಠೇವಣಿ, ಹಣ ಹಿಂಪಡೆಯುವುದು, ಚೆಕ್ಗಳು ಸೇರಿದಂತೆ ಹಲವು ನೇರ ಬ್ಯಾಂಕಿಂಗ್ ಸೇವೆಗಳಿಗೆ ವ್ಯತ್ಯಯ ಉಂಟಾಗಿದೆ. ಹೀಗಾಗಿ ಅಗತ್ಯ ಹಣಕ್ಕಾಗಿ ಗ್ರಾಹಕರು ಎಟಿಎಂಗಳತ್ತ ಮುಖ ಮಾಡಿದ್ದಾರೆ.
ಆದರೆ, ಮುಷ್ಕರ ಒಂದು ದಿನಕ್ಕೆ ಮಾತ್ರ ಸೀಮಿತವಾಗಿದ್ದು, ಅನಿರ್ದಿಷ್ಟ ಮುಷ್ಕರವಲ್ಲ ಎಂದು ಬ್ಯಾಂಕ್ ನೌಕರರು ಸ್ಪಷ್ಟಪಡಿಸಿದ್ದಾರೆ.

