SUDDILIVE || SHIVAMOGGA
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ₹380 ಕೋಟಿ ಬಿಡುಗಡೆ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಲಿ – ಈಶ್ವರಪ್ಪ-Sharavati Pumped Storage Project: Government should clarify the release of ₹380 crore – Eshwarappa
ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಟೆಂಡರ್ಗೂ ಮುನ್ನವೇ ₹380 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದ್ದಾರೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿಚಾರವಾಗಿ ಸಚಿವ ಜಾರ್ಜ್ ಅವರು ಪ್ರಭಾವಿ ರಾಜಕಾರಣಿಗಳ 25 ಎಕರೆ ಜಮೀನನ್ನು ಉಳಿಸುವ ಉದ್ದೇಶದಿಂದ ಕೆಲವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಈಶ್ವರಪ್ಪ ತೀವ್ರವಾಗಿ ಪ್ರತಿಕ್ರಿಯಿಸಿದರು.
“ಪ್ರಭಾವಿ ವ್ಯಕ್ತಿಗಳು 25 ಎಕರೆ ಜಮೀನು ಒತ್ತುವರಿ ಮಾಡಿಕೊಂಡಿದ್ದರೆ, ಸರ್ಕಾರ ಅದನ್ನು ವಶಪಡಿಸಿಕೊಳ್ಳಲಿ. ಅಂತಹ ವ್ಯಕ್ತಿ ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳಲಿ. ಆದರೆ ಈ ವಿಚಾರವನ್ನು ಮುಂದಿಟ್ಟುಕೊಂಡು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತ ಗೊಂದಲವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಮಾಡಬಾರದು” ಎಂದು ಹೇಳಿದರು.
ಟೆಂಡರ್ಗೂ ಮುನ್ನವೇ ₹380 ಕೋಟಿ ಹಣ ಬಿಡುಗಡೆ ಮಾಡಿರುವ ಬಗ್ಗೆ ತಾವು ಈ ಹಿಂದೆ ದಾಖಲೆಗಳ ಸಮೇತ ಪ್ರಶ್ನೆ ಮಾಡಿದ್ದರೂ ಸರ್ಕಾರದಿಂದ ಸಮರ್ಪಕ ಉತ್ತರ ಬಂದಿಲ್ಲ ಎಂದು ಈಶ್ವರಪ್ಪ ಆರೋಪಿಸಿದರು.
“₹380 ಕೋಟಿ ಹಣವನ್ನು ಟೆಂಡರ್ಗೂ ಮುನ್ನ ಬಿಡುಗಡೆ ಮಾಡಿರುವುದು ಹೌದೋ ಅಲ್ಲವೋ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಈ ವಿಚಾರವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಲಾಗುವುದು. ಬಂಗಾರಮಕ್ಕಿಯಲ್ಲಿಯೂ ಈ ಬಗ್ಗೆ ಮಾತನಾಡುತ್ತೇವೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಕ್ರಮಗಳ ವಿರುದ್ಧ ಹೋರಾಟ ಮುಂದುವರಿಸುತ್ತೇವೆ” ಎಂದು ಹೇಳಿದರು.
‘ವಂದೇ ಮಾತರಂ’ ಕುರಿತು ಚರ್ಚೆಯೇ ಅನಗತ್ಯ
ವಂದೇ ಮಾತರಂ ಗೀತೆಯ ಕುರಿತು ದೇಶದಲ್ಲಿ ನಡೆಯುತ್ತಿರುವ ಚರ್ಚೆ ಸರಿಯಲ್ಲ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.
ವಂದೇ ಮಾತರಂ ಗೀತೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶದ ಯುವಕರಲ್ಲಿ ಜಾಗೃತಿ ಮೂಡಿಸಿತ್ತು. ಬಂಕಿಮಚಂದ್ರ ಚಟ್ಟೋಪಾಧ್ಯಾಯರು ರಚಿಸಿದ ಈ ಗೀತೆಯನ್ನು ಕಾಂಗ್ರೆಸ್ನ ಮಹಾ ಅಧಿವೇಶನಗಳಲ್ಲಿಯೂ ಹಲವು ವರ್ಷಗಳ ಕಾಲ ಪೂರ್ಣವಾಗಿ ಹಾಡಲಾಗುತ್ತಿತ್ತು ಎಂದು ಅವರು ಹೇಳಿದರು.
ವಂದೇ ಮಾತರಂ ಕುರಿತು ರಾಜಕೀಯ ಕಾರಣಗಳಿಂದ ಹಗುರವಾಗಿ ಮಾತನಾಡುವುದು ಸರಿಯಲ್ಲ. ಈ ಗೀತೆಯ ಮಹತ್ವವನ್ನು ಮುಂದಿನ ದಿನಗಳಲ್ಲಿ ಎಲ್ಲರೂ ಅರ್ಥಮಾಡಿಕೊಳ್ಳಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಂದೇ ಮಾತರಂ ಅನ್ನು ಪೂರ್ಣವಾಗಿ ಹಾಡುತ್ತಾರೆಯೇ ಎಂಬ ರೀತಿಯ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಗೀತೆಯ ಮಹತ್ವವನ್ನು ಚರ್ಚಿಸುವುದು ಸೂಕ್ತವಲ್ಲ ಎಂದರು.
ಬಿ.ಕೆ. ಹರಿಪ್ರಸಾದ್ ಹೇಳಿಕೆಗೂ ಈಶ್ವರಪ್ಪ ತಿರುಗೇಟು
ಉಮರ್ ಖಾಲಿದ್ ಕುರಿತು ಬಿ.ಕೆ. ಹರಿಪ್ರಸಾದ್ ಅವರು ನೀಡಿರುವ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೂ ಈಶ್ವರಪ್ಪ ಪ್ರತಿಕ್ರಿಯಿಸಿದರು.
ಹರಿಪ್ರಸಾದ್ ಅವರು ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರಾಗಿದ್ದು, ಅವರದ್ದೇ ಸರ್ಕಾರ ಇರುವುದರಿಂದ, ರಾಜ್ಯ ಸರ್ಕಾರ ವಿಶೇಷ ಪ್ರಶಸ್ತಿಯೊಂದನ್ನು ರಚಿಸಿ ಅವರಿಗೆ ‘ರಾಷ್ಟ್ರಭಕ್ತ’ ಎಂಬ ಪ್ರಶಸ್ತಿ ನೀಡಲಿ ಎಂದು ವ್ಯಂಗ್ಯವಾಡಿದರು.
ರಾಷ್ಟ್ರಭಕ್ತಿ ಮತ್ತು ರಾಷ್ಟ್ರದ್ರೋಹದಂತಹ ವಿಚಾರಗಳ ಕುರಿತು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಈಶ್ವರಪ್ಪ ಹೇಳಿದರು.
ಕಸ್ತೂರಿರಂಗನ್ ವರದಿ ವಿರುದ್ಧ ರಾಜ್ಯವ್ಯಾಪಿ ಹೋರಾಟ
ತೀರ್ಥಹಳ್ಳಿಯಲ್ಲಿ ಕಸ್ತೂರಿರಂಗನ್ ವರದಿ ವಿರುದ್ಧ ನಡೆಯಲಿರುವ ಸಭೆಯಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ರೈತರೊಂದಿಗೆ ಸರ್ಕಾರ ನಡೆಸುವ ಸಂಭಾಷಣೆಗೆ ಮಾತ್ರ ಸೀಮಿತವಾಗದೆ, ಸಾರ್ವಜನಿಕರ ಹಾಗೂ ಸಂಘ-ಸಂಸ್ಥೆಗಳ ಅಭಿಪ್ರಾಯಗಳನ್ನೂ ಪರಿಗಣಿಸಬೇಕು ಎಂಬ ನಿಲುವು ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ನಡೆಯಲಿರುವ ಪರಿಸರ ಸತ್ಯಾಗ್ರಹದ ಬಳಿಕ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಅವರು ತಿಳಿಸಿದರು.
“ಈಗ ಬಂದಿರುವುದು ಏಳನೇ ಡ್ರಾಫ್ಟ್. ಇದರಿಂದಲೇ ಕಸ್ತೂರಿರಂಗನ್ ವರದಿ ಅಂತಿಮವಾಗುವುದಿಲ್ಲ. ಇನ್ನೂ ಕಾನೂನು ಹೋರಾಟ ಸೇರಿದಂತೆ ಹಲವು ಹಂತಗಳಿವೆ. ಪರಿಸರ ಸತ್ಯಾಗ್ರಹದ ಬಳಿಕ ಮುಂದಿನ ಕಾರ್ಯತಂತ್ರ ರೂಪಿಸಲಾಗುವುದು. ಅದರಂತೆ ರಾಜ್ಯವ್ಯಾಪಿ ಮುಂದಿನ ಹೋರಾಟಗಳನ್ನು ನಡೆಸುತ್ತೇವೆ” ಎಂದು ಈಶ್ವರಪ್ಪ ಹೇಳಿದರು.
