ಗೋವುಕಳ್ಳರ ಬಂಧನ


ಸುದ್ದಿಲೈವ್/ಸೊರಬ

ಜಾನುವಾರು ಕಳ್ಳತನದಿಂದ ಸಾರ್ವಜನಿಕರ ನಿದ್ದೆಗೆಡಿಸಿದ್ದ ಇಬ್ಬರು ಕಳ್ಳರನ್ನು ಸೊರಬ ಪೊಲೀಸರು ಬಂಧಿಸಿದ್ದಾರೆ. 

ಪಟ್ಟಣದ ಚಿಕ್ಕಪೇಟೆಯಲ್ಲಿ ಇತ್ತೀಚೆಗೆ ಜಾನುವಾರು ಕಳುವು ಮಾಡಲಾಗಿತ್ತು. ಜಾನುವಾರನ್ನು ಕಳ್ಳರು ಹೊತ್ತೊಯ್ಯುವ ದೃಶ್ಯ ಸಿಸಿ ಕ್ಯಾಮೆರಾವೊಂದರಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಜಾನುವಾರು ಮಾಲಿಕ ಸತೀಶ್ ಎಂಬುವವರು ಸೊರಬ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. 

ಪ್ರಕರಣದ ಜಾಡುಹಿಡಿದು‌ ಹೊರಟ ಪೊಲೀಸರು ಇಬ್ಬರು ಜಾನುವಾರು ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದ ವಾದಿಹುದಾ ಬಡಾವಣೆಯ ಸ್ಟಿಕರ್ ಕಟಿಂಗ್ ಮಾಡುವ ಮೊಹಮ್ಮದ್ ಶಾಹೀದ್ ಹಾಗೂ ಮೊಹಬೂಬ ನಗರದ ಗುಜರಿ ವ್ಯಾಪಾರಿ ಮೊಹಮ್ಮದ್ ಸಲ್ಮಾನ್ ಎಂಬುವವರನ್ನು ಬಂಧಿಸಲಾಗಿದೆ. ಅಪಾದಿತರ ಮೇಲೆ ಸಾಗರ ಪೊಲೀಸ್ ಠಾಣೆಯಲ್ಲಿಯೂ ಜಾನುವಾರು ಕಳ್ಳತನದ ಪ್ರಕರಣ ಸಹ ದಾಖಲಾಗಿದೆ ಎಂದು ತಿಳಿದು ಬಂದಿದೆ. 

ಇನ್ನು ಎಸ್ಪಿ ಮಿಥುನ್ ಕುಮಾರ್ , ಎ.ಎಸ್ಪಿ ಗಳಾದ ಅನಿಲ್ ಭೂಮರೆಡ್ಡಿ, ಕಾರ್ಯಪ್ಪ, ಶಿಕಾರಿಪುರ ಡಿವೈಎಸ್ಪಿ ಕೆ.ಇ. ಕೇಶವ ಮಾರ್ಗದರ್ಶನದಲ್ಲಿ ಸೊರಬ ಸಿಪಿಐ ಎಲ್. ರಾಜಶೇಖರ್ ನೇತೃತ್ವದ ಪಿಎಸ್ಐ ಎಚ್.ಎನ್. ನಾಗರಾಜ್, ಸಿಬ್ಬಂದಿ ಕೆ.ಎನ್. ಲೋಕೇಶ್, ರಾಘವೇಂದ್ರ, ವಿನಯ್, ನಾಗೇಶ್, ದಿನೇಶ್, ಮೋಹನ್, ಇರ್ಷಾದ್ ಅಲಿಖಾನ್, ರಾಜುನಾಯ್ಕ ನೇತೃತ್ವದ ತಂಡ ಜಾನುವಾರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪೊಲೀಸರ ಕಾರ್ಯವೈಖರಿಗೆ ಪುರಸಭೆ ಸದಸ್ಯ ಹಾಗೂ ಚಿಕ್ಕಪೇಟೆ ನಿವಾಸಿ ಡಿ.ಎಸ್. ಪ್ರಸನ್ನ ಕುಮಾರ್ ಮತ್ತು ವಿವಿಧ ಹಿಂದೂಪರ ಸಂಘಟನೆಯವರು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close