ಸುದ್ದಿಲೈವ್/ಸೊರಬ
ಸರ್ಕಾರದ ಆದೇಶ, ಕಾನೂನು ಧಿಕ್ಕರಿಸಿ ಅರಣ್ಯನಾಶ ಅವ್ಯಾಹತವಾಗಿ ನಡೆಯುತ್ತಿದ್ದು, ಕಂತನಹಳ್ಳಿ ಗ್ರಾಮದ ಸನಂ ೮ ರ ನಿತ್ಯ ಹರಿದ್ವರ್ಣದ ಸಮೃದ್ಧ ಕಾಡಿನಲ್ಲಿ ಅಪಾರ ಪ್ರಮಾಣದ ಬೆಲೆಬಾಳುವ ಪಾರಂಪರಿಕ ವೃಕ್ಷಗಳನ್ನು ಕಡಿದು ನಾಶಪಡಿಸಲಾಗಿದೆ.
ಕಂತನಹಳ್ಳಿ ಸನಂ ೮ರಲ್ಲಿ ಒಟ್ಟು ೫೩೩ ಎಕರೆ ಅರಣ್ಯವಿದೆ. ಇದಕ್ಕೆ ತಾಗಿಕೊಂಡು ಸಾರೆಮರೂರು ಗ್ರಾಮದ ಸನಂ ೨೭ ರಲ್ಲಿ ೩೫೨ ಎಕರೆ ಅರಣ್ಯವಿದೆ. ಪ್ರಸ್ತುತ ಈ ಸನಂ ಗೆ ತಾಗಿಕೊಂಡಿರುವ ಕೆಲ ಖಾಸಗಿ ಅಸ್ತಿಯವರೂ ಸೇರಿದಂತೆ ಪ್ರತ್ಯೇಕ ಇದೇ ಸನಂ ನಲ್ಲಿ ಸುಮಾರು ೧೫ ಎಕರೆ ಅತಿಕ್ರಮಣವಾಗಿದೆ.
ಈಗ ಕಡಿದುರುಳಿಸಿರುವ ೮೦ಕ್ಕೂ ಹೆಚ್ಚು ಮರಗಳು ಬೆಲೆಬಾಳುವ ಮರಗಳಾಗಿದ್ದು ನಂದಿ, ಹೊನ್ನೆ, ಬಣಗಿ, ಮತ್ತಿ, ಹುಣಾಲು ಮುಂತಾದ ಜಾತಿಯವದ್ದಾಗಿದೆ. ಈ ಮರಗಳ ಕಡಿತಲೆ ಜೊತೆಗೆ ಸಾವಿರಾರು ಮುಂಪೀಳಿಗೆ ಸಸ್ಯಗಳು ನಾಶಗೊಂಡಿವೆ.
ಇಲ್ಲಿ ಒತ್ತೂವರಿ ಅಥವಾ ಅತಿಕ್ರಮಣಕ್ಕಾಗಿ ನಾಶಪಡಿಸಲು ಸಜ್ಜು ನಡೆಯುತ್ತಿದ್ದಂತೆ ಗೋಚರಿಸುತ್ತಿದ್ದು ಬೆಲೆ ಬಾಳುವ ಮರಗಳನ್ನು ಕಟ್ಟಿಗೆ ಮಾಡಲು ಕತ್ತರಿಸಲಾಗಿದೆ. ಬೃಹತ್ ಪೈಕಸ್ ಮರವನ್ನು ಧರೆಗುರುಳಿಸಿದ್ದು ಸಾವಿರಾರು ಪಕ್ಷಿಗಳ ಆವಾಸ, ಆಹಾರಕ್ಕೆ ಕುತ್ತು ತರಲಾಗಿದೆ. ನೂರಾರು ಪಕ್ಷಿಗಳ ಮೊಟ್ಟೆ, ಮರಿಗಳು ಅಸು ನೀಗಿವೆ.
ಮುಖ್ಯವಾಗಿ ಇದು ನಿರ್ಜನ ಪ್ರದೇಶವೇನಲ್ಲ, ವಾಹನ ಓಡಾಡುವ ರಸ್ತೆ ವ್ಯವಸ್ಥೆ ಇರುವ ಇಲ್ಲಿ ಏನೆ ಚಟುವಟಿಕೆ ನಡೆದರೂ ಗಮನಕ್ಕೆ ಬರುವಂತಿದೆ. ಆದಾಗ್ಯೂ ಅರಣ್ಯ ಇಲಾಖೆ ಗಮನಕ್ಕೆ ಬಾರದಿರುವುದು ಪ್ರಶ್ನಾರ್ಹ ಎನ್ನುತ್ತಾರೆ ಸ್ಥಳೀಯರು. ಈ ಅತಿಕ್ರಮಣ ಪ್ರಭಾವಿ ವ್ಯಕ್ತಿಗಳದ್ದಾಗಿದ್ದು, ಅರಣ್ಯ ಇಲಾಖೆ ಬಾಯಿ ಮುಚ್ಚಿಸಿ ಪ್ರಕರಣವನ್ನು ತಿರುಚಲಾಗುತ್ತಿದೆ. ಇಲಾಖೆಯೂ ಲಾಬಿಗೆ ಒಳಗಾಗಿದೆ ಎಂಬ ಆರೋಪವೂ ಗ್ರಾಮಸ್ಥರಿಂದ ಕೇಳಿ ಬಂದಿದೆ.
ಸಿಬ್ಬಂದಿ ಕೊರತೆ ಇತ್ಯಾದಿ ಕಾರಣ ಒಡ್ಡುತ್ತ ಲಾಬಿ ನಡೆಸುತ್ತಿರುವ ಅರಣ್ಯ ಇಲಾಖೆಯ ನಿಷ್ಕಾಳಜಿಯಿಂದಾಗಿಯೆ ಸೊರಬದ ಅನೇಕ ಕಾನು ಅರಣ್ಯಗಳು ಬರಿದಾಗುತ್ತಿವೆ ಎಂದು ಹತಾಶೆ ವ್ಯಕ್ತಪಡಿಸಿರುವ ಸ್ಥಳಿಯರು ತಮ್ಮ ಹೆಸರು ಹೇಳಲು ಕೂಡ ಭಯಪಡುವ ವಾತಾವರಣ ಸೃಷ್ಟಿಯಾಗಿದೆ ಎಂದು ಬೇಸರಿಸಿದ್ದಾರೆ.
ಸಧ್ಯಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊರಬದ ಆರ್ ಎಫ್ ಒ ಮೂವರನ್ನ ಬಂಧಿಸಿರುವುದಾಗಿ ತಿಳಿದು ಬಂದಿದೆ. ಅಕ್ರಮ ನಾಟಗಳನ್ನ ವಶಕ್ಕೆ ಪಡೆದಿದೆ. ಕಾರಣ ಅರಣ್ಯ ಸಚಿವರ ಪತ್ರವೊಂದು ಅರಣ್ಯ ಇಲಾಖೆಗೆ ಬರೆದರುವುದು ಈ ಕ್ರಮಕ್ಕೆ ಕಾರಣ ಎಂದು ಬಣ್ಣಿಸಲಾಗುತ್ತಿದೆ.