ಸುದ್ದಿಲೈವ್/ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾಲಯದ (Kuvempu university) ಪದವಿತರಗತಿಗಳ ಕನ್ನಡ ಐಚ್ಚಿಕ ಪಠ್ಯ(Text) (೨೦೨೪-೨೭) ಕ್ರಮದಲ್ಲಿ ಆಯ್ಕೆಯಾಗಿರುವ ಕವಿ, ಪತ್ರಕರ್ತ ಎನ್.ರವಿಕುಮಾರ್ಟೆಲೆಕ್ಸ್ ಅವರ ಕವಿತೆ "ಮರಣ ಮೃದಂಗ" ಮತ್ತು ಕತೆಗಾರ ಡಾ.ರವಿಕುಮಾರ್ ನೀಹ ಅವರ "ಅವುಹಂಗೇ" ಕತೆ ಕುರಿತು ಇಲ್ಲಿನ ಕಮಲಾನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಅಂತರ್ ಕಾಲೇಜು ಪಠ್ಯಕೇಂದ್ರಿತ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಮಲಾ ನೆಹರು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕಾಲೇಜಿನ ಸಿರಿಸಾಹಿತ್ಯ ಸಂಘ ಕನ್ನಡವಿಭಾಗದ ವತಿಯಿಂದ ಫೆ. 20 ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಈ ಸಂವಾದ ಕಾರ್ಯಕ್ರಮದಲ್ಲಿ ನಗರದ ಸಹ್ಯಾದ್ರಿ ಕಲಾ ಕಾಲೇಜು, ಡಿವಿಎಸ್ ಕಲಾ ಮತ್ತು ವಿಜ್ಞಾನಕಾಲೇಜು, ಮತ್ತು ಸರ್ಕಾರಿ ಪ್ರಥಮದರ್ಜೆ ಕಾಲೇಜು ಬಾಪೂಜಿನಗರ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಕವಿ ಎನ್. ರವಿಕುಮಾರ್ ಟೆಲೆಕ್ಸ್, ಕತೆಗಾರ ಡಾ. ರವಿಕುಮಾರ್ ನೀಹ ಅವರುಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಕಾಲೇಜಿನ ಪ್ರಾಚಾರ್ಯರಾದ ಡಾ. ಅರ್ ಎಂ ಜಗದೀಶ್ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ವಿಭಾಗದ ಮುಖ್ಯಸ್ಥರೂ , ಖ್ಯಾತ ವಿಮರ್ಶಕರೂ ಆದ ಆರಡಿಮಲ್ಲಯ್ಯ ಪಿ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಲಿದ್ದಾರೆ. ವಿಧ್ಯಾರ್ಥಿಗಳಾದ ಶರಣ್ ಹೆಚ್ ಎಸ್ ಮತ್ತು ದಿವ್ಯ ಜಿ ಪಠ್ಯಕ್ರಮದಲ್ಲಿನ ಕತೆ ಮತ್ತು ಕವಿತೆಯನ್ನು ಓದುವರು. ಉಪನ್ಯಾಸಕರಾದ ಡಾ ಬಸವರಾಜ ಟಿ ಎನ್ ಅವರಿಂದ ವಚನಗಾಯನವಿರುತ್ತದೆ.