SUDDILIVE || SHIKARIPURA
ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಮಗು ಸಾವು-Baby dies at Mother and Child Hospital
ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಕುಟುಂಬದವರು ಮಂಗಳವಾರ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ತಾಲೂಕಿನ ಕೆಂಚಿಗೊಂಡನಕೊಪ್ಪ ಗ್ರಾಮದ ಸೌಮ್ಯಾ ಸತೀಶ್ ನಾಯ್ಕ ಎಂಬುವರು ಹೆರಿಗೆಗಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭಾನುವಾರ ಬೆಳಗ್ಗೆ ದಾಖಲಾಗಿದ್ದರು. ಮಂಗಳವಾರ ಬೆಳಗ್ಗೆ ಗಂಡು ಮಗು ಜನನವಾಗಿದ್ದು, ಮರಣ ಹೊಂದಿದೆ ಎಂಬ ವಿಷಯ ತಿಳಿದ ಗ್ರಾಮಸ್ಥರು ಆಸ್ಪತ್ರೆ ಎದುರು ಜಮಾಯಿಸಿ, ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯರು ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದ ಕಾರಣ ಹೀಗಾಗಿದೆ. ಳಂಬವಾಗಿ ಹೆರಿಗೆ ಮಾಡಿಸಿದ ಪರಿಣಾಮ ಮಗು ಮೃತಪಟ್ಟಿದೆ. ಆ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಶಿವಾನಂದ್, ಪಟ್ಟಣ ಠಾಣೆ ಸಬ್ ಇನ್ ಸ್ಪೆಕ್ಟರ್ ಶರತ್ ಆಗಮಿಸಿ ಗ್ರಾಮಸ್ಥರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಸೌಮ್ಯಾ ಅವರಿಗೆ ಅಧಿಕ ರಕ್ತದೊತ್ತಡ, ಮಧುಮೇಹ ಎರಡೂ ಇತ್ತು. ವೈದ್ಯರು ಮಗು ಮತ್ತು ತಾಯಿಯ ಪ್ರಾಣ ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ ಮಗು ಅಸುನೀಗಿದೆ. ಮಗುವಿನ ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯಾಧಿಕಾರಿ ಡಾ. ಶಿವಾನಂದ್ ತಿಳಿಸಿದ್ದಾರೆ.
ವೈದ್ಯರು ಮಗುವನ್ನು ಉಳಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಜಿಲ್ಲೆಯಲ್ಲೇ ಅತಿ ಹೆಚ್ಚು ಹೆರಿಗೆಗಳು ಆಗುವುದು ಶಿಕಾರಿಪುರ ಆಸ್ಪತ್ರೆಯಲ್ಲಿ. ಹಾಗಾಗಿ ಬೇರೆ ಬೇರೆ ತಾಲೂಕಿನಿಂದ ಹೆಣ್ಣುಮಕ್ಕಳು ಇಲ್ಲಿಗೆ ಹೆರಿಗೆಗೆ ಬರುತ್ತಾರೆ. ಇಲ್ಲಿ ಅರಿವಳಿಕೆ ತಜ್ಞರ ಕೊರತೆಯಿದೆ. ನಾಳೆಯಿಂದ ಒಬ್ಬ ವೈದ್ಯರನ್ನು ನಿಯೋಜಿಸಿದ್ದೇನೆ. ಬ್ಲಡ್ ಬ್ಯಾಂಕ್ ಅಗತ್ಯವಿದೆ. ಅನುದಾನ ಇದೆ. ಆದರೆ ಸರಿಯಾದ ಜಾಗದ ಕೊರತೆಯಿದೆ.
- ಡಾ. ನಟರಾಜ್ ಡಿಎಚ್ಒ