SUDDILIVE || SHIVAMOGGA
ಮತ್ತೋರ್ವ ಯೋಧನಿಗೆ ಭವ್ಯ ಸ್ವಾಗತ-A grand welcome for another soldier
ಜಮ್ಮು ಮತ್ತು ಕಾಶ್ಮೀರದ ಕಥುವಾ ಸೇನಾ ಸೆಕ್ಟರ್ನಲ್ಲಿ ಕರ್ತವ್ಯ ನಿರ್ವಹಿಸುತ್ತಾ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಶಿವಮೊಗ್ಗ ಮೂಲದ ಭಾರತೀಯ ಸೇನೆಯ ಹವಾಲ್ದಾರ್ ವಿಜಯ್ ಕುಮಾರ್ ಅವರು ಇಂದು [ಜೂನ್ 09, 2025]: ತಮ್ಮ ತವರು ಜಿಲ್ಲೆ ಶಿವಮೊಗ್ಗಕ್ಕೆ ಪತ್ನಿ ರೇಖಾ ಮತ್ತು ಮಕ್ಕಳಾದ ಸುಶ್ಮಿತಾ (13) ಹಾಗೂ ಶಿವನ್ಯಾ (7) ಅವರೊಂದಿಗೆ ವಾಪಸ್ ಆಗಿದ್ದು, ಜಿಲ್ಲೆಯ ವಿವಿಧ ಸಂಘಟನೆಗಳಿಂದ ಅವರಿಗೆ ಆತ್ಮೀಯ ಹಾಗೂ ಭವ್ಯ ಸ್ವಾಗತ ದೊರೆಯಿತು.
ವಿಜಯ್ ಕುಮಾರ್ ಅವರು ಆಗಮಿಸುತ್ತಿದ್ದಂತೆ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ ನೂರಕ್ಕು ಹೆಚ್ಚು ಮಂದಿ ಹೂವಿನ ಹಾರ ಹಾಕಿ, ಸನ್ಮಾನಿಸಿ, ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಈ ನಡುವೆ ಶಿವಮೊಗ್ಗ ಜಿಲ್ಲಾ ಎನ್ಎಸ್ಯುಐ ವತಿಯಿಂದ ಈ ಸ್ವಾಗತ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್, ಬ್ಲಾಕ್ ಅಧ್ಯಕ್ಷರಾದ ಶಿವಕುಮಾರ್, ಯುವ ಕಾಂಗ್ರೆಸ್ ಮುಖಂಡರಾದ ಸಿಜಿ ಮಧುಸೂದನ್, ಚೇತನ್ ಕೆ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಹರ್ಷಿತ್ ಗೌಡ, ಎನ್ಎಸ್ಯುಐ ಅಧ್ಯಕ್ಷರಾದ ವಿಜಯಕುಮಾರ್, ಯುವ ಕಾಂಗ್ರೆಸ್ ಶಿವಮೊಗ್ಗ ನಗರಾಧ್ಯಕ್ಷರಾದ ಚರಣ್, ಎನ್ಎಸ್ಯುಐ ಕಾರ್ಯಾಧ್ಯಕ್ಷರಾದ ಕಾಟಿಕೆರೆ ರವಿ ಸೇರಿದಂತೆ ಅಬ್ದುಲ್ ಸತ್ತಾರ್, ಶಿವಕುಮಾರ್, ಧನರಾಜ್, ಗೌತಮ್, ರವಿ, ಚಂದ್ರೋಜಿ, ವರುಣ್, ಸುಭಾನ್, ಪರಾಜ್ ತೌಪಿಕ್, ಅರ್ಫತ್, ಅಭಿಷೇಕ್, ಶ್ರೀಕಾಂತ್, ಜೀವನ್, ನಂದೀಶ್ ಮತ್ತು ಹಲವು ಯುವ ಕಾಂಗ್ರೆಸ್ ಹಾಗೂ ಎನ್ಎಸ್ಯುಐ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಆಪರೇಷನ್ ಸಿಂಧೂರ್ನಲ್ಲಿ ವಿಜಯ್ ಕುಮಾರ್ ಪಾತ್ರ:
ಪೆಹೆಲ್ಗಾಂನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಭಾರಿ ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನದ ಕೌಂಟರ್ ಫೈರ್ ಅನ್ನು ಎದುರಿಸಿದ ಯೋಧರಲ್ಲಿ ಹವಾಲ್ದಾರ್ ವಿಜಯ್ ಕುಮಾರ್ ಅವರೂ ಒಬ್ಬರು. ಅವರು ಕಾರ್ಯನಿರ್ವಹಿಸುತ್ತಿದ್ದ ಜಮ್ಮುವಿನ ಕಥುವಾ ಸೆಕ್ಟರ್ ಪಾಕಿಸ್ತಾನದ ಪ್ರಮುಖ ಗುರಿಗಳಲ್ಲಿ ಒಂದಾಗಿತ್ತು. ಪಾಕಿಸ್ತಾನ ಗಡಿಯಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಈ ಸೆಕ್ಟರ್ಗೆ ಪಾಕಿಸ್ತಾನವು ರಾತ್ರಿ ಹೊತ್ತು ಡ್ರೋನ್ಗಳ ಮೂಲಕ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಈ ಹೈ ಅಲರ್ಟ್ ವಲಯದಲ್ಲಿ ವಿಜಯ್ ಕುಮಾರ್ ಸೇರಿದಂತೆ ಯೋಧರು ಪಾಕಿಸ್ತಾನದಿಂದ ಹಾರಿ ಬರುತ್ತಿದ್ದ ಡ್ರೋನ್ಗಳನ್ನು ನಿಷ್ಕ್ರಿಯಗೊಳಿಸುವ ಅಥವಾ ಹೊಡೆದುರುಳಿಸುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ವಿಜಯ್ ಕುಮಾರ್ ಅವರು ಸೆಕ್ಟರ್ನ ಭದ್ರತಾ ವ್ಯವಸ್ಥೆ ಮತ್ತು ಪಾಕ್ ಡ್ರೋನ್ಗಳ ಮೇಲೆ ಕಣ್ಗಾವಲು ಇಡುವ ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದರು. ಭದ್ರತಾ ದೃಷ್ಟಿಯಿಂದ, ಕಾರ್ಯಾಚರಣೆ ಸಂದರ್ಭದಲ್ಲಿ ಇಲ್ಲಿನ ಯೋಧರು ತಮ್ಮ ಕುಟುಂಬಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದ್ದರು. ಇದೀಗ ತಮ್ಮ ಕುಟುಂಬವನ್ನು ವಾಪಸ್ ಕರೆದೊಯ್ಯುವ ಸಲುವಾಗಿ ಯೋಧ ವಿಜಯ್ ಕುಮಾರ್ ವಾಪಸ್ ಆಗಿದ್ದಾರೆ.
ವಿಜಯ ಕುಮಾರ್ ರವರ ಸೇನಾ ಸೇವೆ
2002ರ ಸೆಪ್ಟೆಂಬರ್ 12ರಂದು ಸೇನೆಗೆ ಸೇರ್ಪಡೆಗೊಂಡಿರುವ ವಿಜಯ್ ಕುಮಾರ್ ಅವರು ಇಲ್ಲಿಯವರೆಗೆ 23 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿದ್ದಾರೆ. ಅವರು ಭಾರತೀಯ ಸೇನೆಯ ಇಎಂಇ (ಎಲೆಕ್ಟ್ರಾನಿಕ್ ಮೆಕ್ಯಾನಿಕಲ್ ಇಂಜಿನಿಯರ್) ಕಾರ್ಪ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ವರ್ಷ ಸೆಪ್ಟೆಂಬರ್ ವೇಳೆಗೆ ಸೇನೆಯಿಂದ ನಿವೃತ್ತರಾಗಲಿರುವ ವಿಜಯಕುಮಾರ್, ಇದುವರೆಗೂ 6ಕ್ಕೂ ಹೆಚ್ಚು ಸರ್ವಿಸ್ ಮೆಡಲ್ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಶಿವಮೊಗ್ಗದ ಸೀಗೆಹಟ್ಟಿಯ ತುಮಕೂರು ಶ್ಯಾಮರಾವ್ ರಸ್ತೆಯಲ್ಲಿರುವ ಜಯಕಾಶಿ ನಿಲಯದಲ್ಲಿ ಅವರು ವಾಸವಾಗಿದ್ದಾರೆ.
ವಿಜಯಕುಮಾರ್ ಸಂತಸ
ರೈಲ್ವೆ ನಿಲ್ದಾಣದಲ್ಲಿ ತಮಗೆ ಸಿಕ್ಕ ಸ್ವಾಗತ ಹಾಗೂ ಗೌರವನ್ನು ಸ್ವೀಕರಿಸಿದ ಯೋಧ ವಿಜಯ್ ಕುಮಾರ್ ಪ್ರತಿಯೊಬ್ಬ ಯೋಧನು ಸಹ ತನ್ನ ವೃತ್ತಿ ಜೀವನದಲ್ಲಿ ಯಾವುದಾದರೂ ಒಂದು ವಿಶೇಷ ಕಾರ್ಯಾಚರಣೆಯಲ್ಲಿ ಭಾಗಿಯಾಗಬೇಕು ಎಂದು ಬಯಸುತ್ತಾನೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ನನ್ನು ಅದೃಷ್ಟ. ಅಂತಿಮವಾಗಿ ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ನಾವು ಸಿದ್ದರಾಗಿಯೇ ಇರುತ್ತೇವೆ. ಪ್ರತಿಯೋಧನು ಸಹ ಸೇನಾ ವಸ್ತ್ರ ಧರಿಸಿದಾಗಲೇ ಇದನ್ನು ತೀರ್ಮಾನಿಸುತ್ತಾನೆ ಎಂದರು.
ಇನ್ನೂ ವಿಜಯ್ ಕುಮಾರ್ರವರ ಪತ್ನಿ ರೇಖಾರವರು ಮಾತನಾಡಿ, ಭದ್ರತೆಯ ದೃಷ್ಟಿಯಿಂದ ನಮ್ಮನ್ನು ಊರಿಗೆ ಕಳುಹಿಸಿದ್ದರು. ಈ ನಡುವೆ ಕಾರ್ಯಾಚರಣೆ ನಡೆಯುತ್ತಿದ್ದಾಗ ಭಯವಾಗಿತ್ತು. ಆದರೆ ಯೋಧನ ಪತ್ನಿಯಾಗಿ ಆ ಭಯವನ್ನು ಎದುರಿಸದೆ ಬೇರೆ ದಾರಿಯಿಲ್ಲ. ಇವೆಲ್ಲದರ ಹೊರತಾಗಿ ದೇಶ ಮೊದಲು. ಇದೀಗ ಶಿವಮೊಗ್ಗದಲ್ಲಿ ತಮ್ಮ ಪತಿಗೆ ಸಿಗುತ್ತಿರುವ ಸ್ವಾಗತ ತುಂಬಾನೆ ಸಂತೋಷ ನೀಡುತ್ತಿದೆ.
A grand welcome for another soldier