SUDDILIVE || SORABA
ನದಿಗೆ ಕಾಲು ಜಾರಿಬಿದ್ದ ವೃದ್ದೆ ಹೆಣವಾಗಿ ಪತ್ತೆ-Elderly woman found dead after slipping into river
ಪಟ್ಟಣದ ದಂಡಾವತಿ ಸೇತುವೆಯಿಂದ ಆಕಸ್ಮಿಕವಾಗಿ ನದಿಗೆ ಬಿದ್ದ ವೃದ್ಧೆಯ ಮೃತ ದೇಹ ಸೋಮವಾರ ಪತ್ತೆಯಾಗಿದೆ.
ಶಿಕಾರಿಪುರ ತಾಲೂಕಿನ ಇಡುಕಿನಹೊಸಕೊಪ್ಪ ಗ್ರಾಮದ ಕೆರಿಯಮ್ಮ (65) ಎಂದು ಗುರುತಿಸಲಾಗಿದ್ದು, ಶುಕ್ರವಾರ ಹಳೇಸೊರಬದ ಮಗಳ ಮನೆಯಿಂದ ಪಟ್ಟಣಕ್ಕೆ ಆಗಮಿಸುವಾಗ ದಂಡಾವತಿ ನದಿ ಸೇತುವೆ ಮೇಲಿನಿಂದ ಆಕಸ್ಮಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದರು.
ಅಗ್ನಿಶಾಮಕ ದಳದ ಠಾಣಾಧಿಕಾರಿ ಕೆ. ಮಹಾಬಲೇಶ್ವರ ನಾಯ್ಕ್ ನೇತೃತ್ವದಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಅವರ ಸಹಕಾರದೊಂದಿಗೆ ನಡೆದ ಕಾರ್ಯಾಚರಣೆಯಲ್ಲಿ ನಾಲ್ಕು ದಿನಗಳ ನಂತರ ಮೃತ ದೇಹ ಪತ್ತೆಯಾಗಿದೆ. ನೀರಿನ ರಭಸಕ್ಕೆ ಘಟನಾ ಸ್ಥಳದಿಂದ ಸುಮಾರು 1.5 ಕಿ.ಮೀ ದೂರದಲ್ಲಿ ದೇಹ ತೇಲಿಕೊಂಡು ಹೋಗಿತ್ತು.
ಕಾರ್ಯಾಚರಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಶಂಕರ್, ಪ್ರಮುಖ ಅಗ್ನಿಶಾಮಕ ಶಾಮಕ ಎಚ್.ಎಂ. ಪ್ರಶಾಂತ್, ಅಗ್ನಿಶಾಮಕ ಕೆ. ಪ್ರಕಾಶ್, ಸಂದೀಪ್ ಪಿ. ರಾಥೋಡ್, ಮುಬಾರಕ್ ಕಾಗಿನೆಲ್ಲಿ, ಚಾಲಕ ಶ್ರೀಶೈಲ ಚಿಪ್ಪಲಕಟ್ಟಿ, ಮಂಗಳೂರಿನ ಮುಳುಗು ತಜ್ಞ ಹರೀಶ್ ಪಾಲ್ಗೊಂಡಿದ್ದರು.
ಮೃತರು ಮೂವರು ಪುತ್ರಿಯರು ಹಾಗೂ ಒರ್ವ ಪುತ್ರನನ್ನು ಅಗಲಿದ್ದಾರೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Elderly woman found dead after slipping into river