SUDDILIVE || SHIVAMOGGA
ಮಾಜಿ ಡಿಸಿಎಂ ಸೇರಿ ಮೂವರ ವಿರುದ್ಧ ಎಫ್ಐಆರ್- ವಕೀಲ ವಿನೋದ್ ಹೇಳಿದ್ದೇನು?-FIR against Ex-DCM Eshwarappa an other two
ಅಕ್ರಮ ಆಸ್ತಿಗಳಿಕೆ ವಿಚಾರದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಪುತ್ರ ಕಾಂತೇಶ್ ಹಾಗೂ ಸೊಸೆಯ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ಕಚೇರಿಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿರುವ ದೂರುದಾರ ವಿನೋದ್ ಗೆ ದೂರಿಗೆ ಸಂಬಂಧಿಸಿದಂತೆ ದಾಖಲಾತಿ ನೀಡುವಂತೆ ನೋಟಿಸ್ ನೀಡಲಾಗಿದೆ.
2012 ರಲ್ಲಿ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ವಿರುದ್ಧ ಶಿವಮೊಗ್ಗದ ವಕೀಲರಾದ ವಿನೋದ್ ಬಿ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ದೂರು ದಾಖಲಿಸಿದ್ದರು. ಪ್ರಕರಣ ತಿರುವು ಪಡೆದುಕೊಂಡು ಕೆ.ಎಸ್.ಈಶ್ವರಪ್ಪ ವಿರುದ್ಧ FIR ದಾಖಲಿಸಿ ತನಿಖೆ ನಡೆಸಲು ಬೆಂಗಳೂರಿನ ವಿಶೇಷ ನ್ಯಾಯಾಲಯ ಆದೇಶ ಮಾಡಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಶಿವಮೊಗ್ಗ ಲೋಕಾಯುಕ್ತರು ದೂರು ದಾಖಲಿಸಿದ್ದರು.
ಶಿವಮೊಗ್ಗ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದರು. ಇದಕ್ಕೆ ಈಶ್ವರಪ್ಪ ತಡೆಯಾಜ್ಞೆ ಪಡೆದಿದ್ದರು ಈ ಪ್ರಕರಣ 3 ಬಾರಿ ಉಚ್ಚ ನ್ಯಾಯಾಲಯದ ಮೆಟ್ಟಲೇರಿತ್ತು. ಅಂತಿಮವಾಗಿ 2021 ರಲ್ಲಿ ನ್ಯಾಯಮೂರ್ತಿ ಮೈಕೆಲ್ ಡಿಕುನ್ನ ಪ್ರಕರಣದ ವಿಚಾರಣೆಗೆ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಆದೇಶಿಸಿದ್ದರು.
ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ರವರು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ 13(1) (d) (e) ಅಡಿಯಲ್ಲಿ FIR ದಾಖಲಿಸಿ 3 ತಿಂಗಳ ಒಳಗಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಶಿವಮೊಗ್ಗ ಲೋಕಾಯುಕ್ತರಿಗೆ ಆದೇಶಿಸಿದ್ದಾರೆ.
ಈಗ ಮಾಜಿ ಡಿಸಿಎಂ ಈಶ್ವರಪ್ಪ, ಪುತ್ರ ಕಾಂತೇಶ, ಸೊಸೆ ವಿರುದ್ಧ ಎಫ್ಐಆರ್ ಆಗಿದ್ದು, ನಾಳೆ ದೂರುದಾರ ವಿನೋದ್ ಗೆ ಲೋಕಾಯುಕ್ತ ಕಚೇರಿಗೆ ಹಾಜರಾಗಿ ದೂರು ನೀಡುವಂತೆ ನೋಟಿಸ್ ನೀಡಲಾಗಿದೆ.
ವಕೀಲ ವಿನೋದ್ ಪ್ರತಿಕ್ರಿಯೆ
ಈ ಕುರಿತು ಸುದ್ದಿಲೈವ್ ಗೆ ಮಾಹಿತಿ ನೀಡಿರುವ ವಕೀಲ ವಿನೋದ್ ಮಾಜಿ ಡಿಸಿಎಂ ಈಶ್ವರಪ್ಪನವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮೂರು ತಿಂಗಳಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ ವರದಿಕೊಡಲು ಹೇಳಿತ್ತು. ಮೂರು ತಿಂಗಳ ಅವಧಿಗೆ ಇನ್ನು ಎರಡು ದಿನ ಬಾಕಿಯಿರುವಾಗ ದೂರು ದಾಖಲಾಗಿದೆ. ಇನ್ನು ದಾಳಿ ನಡೆಸಿ ವರದಿ ಯಾವಾಗ ನೀಡುತ್ತಾರೆ ಎಂಬುದೇ ಕುತೂಹಲವಾಗಿದೆ. ನಾಳೆ ಈಶ್ವರಪ್ಪನವರ ಮನೆಯ ಮೇಲೆ ಲೋಕಾಯುಕ್ತ ದಾಳಿ ಆಗುವ ಸಾಧ್ಯತೆಯಿದೆ ಎಂದಿದ್ದಾರೆ.
FIR against Ex-DCM Eshwarappa an other two