SUDDILIVE || SHIVAMOGGA
ಆಟದ ಮೈದಾನ ಪಾಲಿಕೆ ಆಸ್ತಿ-ರಾಷ್ಟ್ರಭಕ್ತರ ಬಳಗದ ವಕೀಲರ ತಂಡ ಆಯುಕ್ತರಿಗೆ ಮನವಿ-Playground Corporation Assets-Nationalist Association Lawyers' Team Appeals to Commissioner
ಜಿಲ್ಲಾಧಿಕಾರಿಗಳ ಎದುರಿನ ಆಟದ ಮೈದಾನ ಪಾಲಿಕೆಗೆ ಸೇರಿದ್ದು ಎಂದು ರಾಷ್ಟ್ರಭಕ್ತರ ಬಳಗ ಮಹಾನಗರ ಪಾಲಿಕೆ ಆಯುಕ್ತರಿಗೆ ದಾಖಲಾತಿಯೊಂದಿಗೆ ಮನವಿ ಸಲ್ಲಿಸಿದೆ.
ಆಟದ ಮೈದಾನವನ್ನ 8 ವಾರದ ಒಳಗೆ ಪರಿಶೀಲಿಸಿ ದಾಖಲಾತಿ ನೀಡುವಂತೆ ನ್ಯಾಯಾಲಯ ಸೂಚಿಸಿದ ಬೆನ್ನಲ್ಲೇ ರಾಷ್ಟ್ರಭಕ್ತರ ಬಳಗದ ವಕೀಲರ ತಂಡ ಆಯುಕ್ತರಿಗೆ ಮನವಿ ನೀಡುವ ಮೂಲಕ ಗಮನ ಸೆಳೆದಿದೆ. ಸಮಸ್ಯೆ ಶೀಘ್ರದಲ್ಲಿಯೇ ಬಗೆಹರಿಯಲಿದೆಯಾ ಅಥವಾ ಹಗ್ಗಜಗ್ಗಾಟದಲ್ಲಿ ಮುಂದುವರೆಯಲಿದೆಯಾ ಕಾದು ನೋಡಬೇಕಿದೆ.
ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಸ್ವತ್ತು ಸರ್ಕಾರಿ ಜಾಗವಾಗಿದ್ದು, ಹಲವಾರು ದಶಕಗಳಿಂದಲೂ ಸಹ ಸಾರ್ವಜನಿಕ ಉದ್ದೇಶಕ್ಕೆ ಉಪಯೋಗಿಸುತ್ತಾ ಬರಲಾಗಿದೆ. ಈ ಜಾಗ ಸರ್ಕಾರದ ಅಂಗಸಂಸ್ಥೆಯಾದ ಶಿವಮೊಗ್ಗ ಮಹಾನಗರ ಪಾಲಿಕೆಯ ಹಕ್ಕು, ಹಿತಾಸಕ್ತಿ ಒಡೆತನಕ್ಕೆ ಒಳಪಟ್ಟ ಜಾಗವಾಗಿದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಾರ್ವಜನಿಕ ಮತ್ತು ಸರ್ಕಾರಿ ಕಚೇರಿಗಳಾದ ಜಿಲ್ಲಾಧಿಕಾರಿಗಳ ಕಚೇರಿ, ಆರ್.ಟಿ.ಓ. ಕಚೇರಿ, ಜಯನಗರ ಪೋಲೀಸ್ ಠಾಣೆ ಹಾಗು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇನ್ನೂ ಹತ್ತು ಹಲವು ಖಾಸಗಿ ವಾಣಿಜ್ಯ ವ್ಯವಹಾರ ನಡೆಯುವ ಸ್ಥಳದ ಮಧ್ಯಭಾಗದಲ್ಲಿ ಇರುವ ಖಾಲಿ ಜಾಗವಾಗಿದ್ದು, ಸದರಿ ಜಾಗವನ್ನು ಹಲವಾರು ದಶಕಗಳಿಂದಲು ಸಾರ್ವಜನಿಕರು ತಮ್ಮ ತಮ್ಮ ದೈನಂದಿನ ಬ್ಯಾಂಕ್, ಸರ್ಕಾರಿ ಕಚೇರಿ ಹಾಗು ಇನ್ನಿತರೆ ಕಾರ್ಯಗಳಿಗೆ ತಮ್ಮ ಓಡಾಟ, ವಾಹನ ನಿಲುಗಡೆ ಮತ್ತು ಇನ್ನಿತರೆ ಉದ್ದೇಶಕ್ಕೆ ಉಪಯೋಗಿಸುತ್ತಾ ಬಂದಿದ್ದು ನಿರ್ವಿವಾದಿತ ವಿಚಾರವಾಗಿದೆ.
•ಈಗಾಗಲೇ ಘನ ಸರ್ಕಾರವು, ಆದೇಶ ಸಂಖ್ಯೆ ನ.ಅ.ಇ.159ಬೆಂರೂಪ್ರಾ2012. ಬೆಂಗಳೂರು ದಿನಾಂಕ: 27/08/2012 ರನ್ವಯ ಶಿವಮೊಗ್ಗ ಮಹಾನಗರ ಯೋಜನೆ 2031ರ ದೊಡ್ಡ ಯೋಜನೆಯನ್ನು ರೂಪಿಸಿ ಶಿವಮೊಗ್ಗ ಮಹಾನಗರವು ಯಾವ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂಬ ಬಗ್ಗೆ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಈ ಬಗ್ಗೆ ತೀರ್ಮಾನ ಕೈಗೊಂಡು ಶಿವಮೊಗ್ಗ ಮಹಾನಗರ ಯೋಜನೆ-2031 ರ ರಾಜ್ಯ ಸರ್ಕಾರದ ವತಿಯಿಂದ ಅಧಿಸೂಚನೆಯನ್ನು ಸಹ ಹೊರಡಿಸಿದ್ದು ಈ ಬಗ್ಗೆ ಮಹಾನಗರ ಯೋಜನೆಯ ಒಂದು ಮಾಸ್ಟರ್ ಪ್ಲಾನ್ ರಚಿತಗೊಂಡಿದ್ದು ಸದರಿ ಪ್ಲಾನ್ ಸಹ 2012ರಲ್ಲಿಯೇ ಅನುಮೋದನೆಗೊಂಡು ಗೆಜೆಟ್ ಅಧಿಸೂಚನೆಯಲ್ಲಿ ಘೋಷಿತವಾಗಿತ್ತು.
ಶಿವಮೊಗ್ಗ ಮಹಾನಗರ ಯೋಜನೆ-2031ರ ಮಹಾನಕ್ಷೆ ಮತ್ತು ಸಂಪೂರ್ಣ ಜೋನಲ್ ರೆಗ್ಯುಲೇಶನ್ ಇದನ್ನು ಅನುಮೋದಿಸಿದ್ದು. ಸದರಿ ಮಹಾನಕ್ಷೆಯನ್ವಯ ಪ್ರಶ್ನಿತ ಸ್ವತ್ತು ಸಾರ್ವಜನಿಕ ಉದ್ಯಾನವನಕ್ಕೆ ಮೀಸಲಿಟ್ಟ ಜಾಗವಾಗಿದ್ದು "ದಟ್ಟ ಹಸಿರು" ಬಣ್ಣದಿಂದ ಗುರುತಿಸಲ್ಪಟ್ಟಿದೆ. ಈ ಮಧ್ಯೆ ಸ್ವತ್ತಿನ ಪಶ್ಚಿಮ ಭಾಗದಲ್ಲಿ 6ಮೀ. (ಅಂದಾಜು 20 ಅಡಿ) ಅಗಲದ ರಸ್ತೆಯು ಇದ್ದು ಸದರಿ ರಸ್ತೆಯ ನಂತರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇನ್ನಿತರೆ ವಾಣಿಜ್ಯ ಸಂಕಿರ್ಣದ ಕಟ್ಟಡಗಳಿರುತ್ತವೆ. ಅದೇ ರೀತಿ ಅನುಸೂಚಿತ ಸ್ವತ್ತಿನ ಪೂರ್ವ ದಿಕ್ಕಿಗೆ ಶಿವಮೊಗ್ಗ-ಸವಳಂಗ ರಸ್ತೆ ಇದ್ದು, ದಕ್ಷಿಣ ಬಾಗಕ್ಕೆ ತಿಲಕ್ ನಗರ ಮುಖ್ಯ ರಸ್ತೆ ಇದ್ದು, ಇದರ ಉತ್ತರ ದಿಕ್ಕಿಗೆ ಖಾಸಗಿ ಸ್ವತ್ತು ಇದ್ದು ಈ ಸ್ವತ್ತಿನ ನಡಿ ಸುಮಾರು 32,670 ಚ.ಅಡಿ ವಿಸ್ತೀರ್ಣದ ಸ್ವತ್ತು ಇರುವ ಜಾಗ ಇದಾಗಿರುತ್ತದೆ.
ಹಲವು ಪಟ್ಟಭದ್ರ ಹಿತಾಸಕ್ತಿಯುಳ್ಳ ವ್ಯಕ್ತಿಗಳು ಅನುಸೂಚಿತ ಸ್ವತ್ತನ್ನು ಈದ್ಗಾ ವಕ್ಫ್ ಗೆ ಸೇರಿದ ಸ್ವತ್ತೆಂದು ತಪ್ಪಾಗಿ ಅರ್ಥೈಸಿಕೊಂಡು ಕಾನೂನುಬಾಹಿರವಾಗಿ ಸ್ವತ್ತಿನ ಪಶ್ಚಿಮ ದಿಕ್ಕಿನಲ್ಲಿರುವ 20 ಅಡಿ ವಿಸ್ತೀರ್ಣದ ರಸ್ತೆಯ ಮಧ್ಯಭಾಗದಲ್ಲಿ ಸುಮಾರು 1.2ಮೀ. ಮತ್ತು 6.8ಮೀ. ನ ಒಂದು ಗೋಡೆ ಆಕಾರದ ಧಾರ್ಮಿಕ ಆಕೃತಿಯನ್ನು ಅನಧಿಕೃತವಾಗಿ ಕಟ್ಟಿ ತಮ್ಮ ಧಾರ್ಮಿಕವಾದ* ಭಾವನೆಗನುಸಾರವಾಗಿ ಸದರಿ ಗೋಡೆಯಾಕೃತಿಗೆ ಅಭಿಮುಖವಾಗಿ ಕೇವಲ ವರ್ಷಕ್ಕೆರಡು ಬಾರಿ ರಂಜಾನ್ ಮತ್ತು ಬಕ್ರೀದ್ ಹಬ್ಬದ ದಿನದಂದು ಮಾತ್ರ ಸಾಮೂಹಿಕ ಪ್ರಾರ್ಥನೆಯನ್ನು ಮಾಡುತ್ತಿದ್ದು, ಇದಕ್ಕೆ ಹಿಂದೆ ಅವಕಾಶ ಕಲ್ಪಿಸಲಾಗಿರುತ್ತದೆ.
ಕೇವಲ ಈ ಅಂಶವನ್ನು ಪರಿಗಣಿಸಿಕೊಂಡು ಹಲವರು ವಕ್ಫ್ ಹೆಸರಿನಲ್ಲಿ ಸದರಿ ಅನುಸೂಚಿತ ಸ್ವತ್ತಿನ ಸಂಪೂರ್ಣ ಮಾಲಿಕತ್ವವನ್ನು ಮತ್ತು ಹಿತಾಸಕ್ತಿಯನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಅಭಿಪ್ರಾಯದೊಂದಿಗೆ ಈ ಜಾಗಕ್ಕೆ ಸಂಬಂಧಪಡದ ಎಮ್ಡಬುಬಿ19(3)1965 ದಿ. 23/02/1965 ರಲ್ಲಿ ಆದ ಕರ್ನಾಟಕ ರಾಜ್ಯ ಅಧಿಸೂಚನೆಯ ಕ್ರಮ ಸಂಖ್ಯೆ 288 ರಲ್ಲಿ ಉಲ್ಲೇಖಿಸಿರುವ* *ಜಾಗವನ್ನೇ ಈ ಅನುಸೂಚಿತ ಜಾಗವೆಂದು ತಪ್ಪು ಮಾಹಿತಿ ನೀಡಿ, ಸದರಿ ಅನುಸೂಚಿತ ಜಾಗವು ಸರ್ಕಾರದಿಂದ ತಮಗೆ ನೀಡಲಾಗಿದೆ ಎಂಬ ವಿಚಾರವನ್ನು ತಪ್ಪು ಭಾವನೆಯೊಂದಿಗೆ ಅನುಸೂಚಿತ ಸ್ವತ್ತಿನ ಮೇಲೆ ಹಕ್ಕನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ.
ಮುಸಲ್ಮಾನರು ತಮ್ಮ ಹೆಸರಿಗೆ ಪ್ರಶ್ನಿತ ಸ್ವತ್ತಿನ ಖಾತೆಯನ್ನು ಕರ್ನಾಟಕ ರಾಜ್ಯ ಪತ್ರ ಸಂಖ್ಯೆ ಎಮ್ ಡಬ್ಲ್ಯುಬಿ19(3)1965 ದಿ.23/02/1965 ರಲ್ಲಿ ಪ್ರಕಟವಾಗಿರುವ ಅಧಿಸೂಚನೆಯ ಆಧಾರದ ಮೇಲೆ ಸ್ವತ್ತಿನ ಅಳತೆಯನ್ನು ಮತ್ತು ತಮ್ಮ ವಕ್ಫ್ ಹೆಸರಿಗೆ ಖಾತೆಯನ್ನು ನಮೂದು ಮಾಡುವಂತೆ ಕೋರಿರುತ್ತಾರೆ. ಆದರೆ ಅದರಿ ಅಧಿಸೂಚನೆಯಲ್ಲಿ 288ನೇ ಸಂಖ್ಯೆಯ ಅಂಶವನ್ನು ಪರಿಶೀಲಿಸಿದಾಗ ಅದರಲ್ಲಿ 1 ಎಕರೆ 20 ಗುಂಟೆ ಎಂದು ನಮೂದಾಗಿದ್ದು ಜೊತೆಯಲ್ಲಿ 100 /100 ಎಂದು ಸಹಾ ನಮೂದಾಗಿರುತ್ತದೆ.
ಸದರಿ 1 ಎಕರೆ 20 ಗುಂಟೆ ವಿಸ್ತೀರ್ಣ ಯಾವ ಸ್ಥಳದಲ್ಲಿ ಅಂದರೆ ಯಾವ ಸರ್ವೆ ನಂಬರ್ ಅಥವಾ ಯಾವ ವಾರ್ಡ್ ಅಥವಾ ಡಿವಿಜನ್ ಎಂಬ ಬಗ್ಗೆ ಯಾವುದೇ ನಮೂದುಗಳಿರುವುದಿಲ್ಲ ಮತ್ತು 100 / 100 ಎಂಬ ಸಂಖ್ಯೆಯು ಯಾವ ರೀತಿಯ ವಿಸ್ತೀರ್ಣ (ಅಡಿ ಅಥವಾ ಮೀಟರ್) ದಲ್ಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಈ ರೀತಿ ಯಾವುದೇ ಸ್ಥಳದ ಚಕ್ಕುಬಂಧಿಯ ವಿವರಗಳು ಇಲ್ಲದಾಗ್ಯೂ ಸಹಾ ಸದರಿ ಸ್ವತ್ತು ಅಜರ್ ಮೊಹಲ್ಲಾ ಎಂಬ ವಿಳಾಸ ಮಾತ್ರ ಇರುತ್ತದೆ. ಸದರಿ ಅಜರ್ ಮೊಹಲ್ಲ ಹಾಲಿ ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯ ಶಿವಪ್ಪ ನಾಯಕ ವೃತ್ತ / ಅಮೀರ್ ಅಹ್ಮದ್ ವೃತ್ತ ಎಂದು ಕರೆಯಲ್ಪಡುವ ಜಾಗದಿಂದ ಎಂ.ಕೆ.ಕೆ. ರಸ್ತೆಯ ಜಾಗದಲ್ಲಿರುವ ಪ್ರದೇಶವಾಗಿದ್ದು, ಸುಮ್ಮನೆ ದುರುದ್ದೇಶದಿಂದ ಯಾವುದೋ ಜಾಗದ ನೋಟಿಫಿಕೇಷನ್ ಪಡೆದುಕೊಂಡು ಅನುಸೂಚಿತ ಸ್ವತ್ತಿನ ಜಾಗವನ್ನು ಕಬಳಿಸುವ ಪ್ರಯತ್ನದಲ್ಲಿ ಮುಂದುವರೆದು ಯಾವುದೇ ದಾಖಲಾತಿಗಳ ಆಧಾರವಿಲ್ಲದೇ ಈದ್ಗಾ ವಕ್ಫ್ ಹೆಸರಿಗೆ ಪ್ರಶ್ನಿತ ಜಾಗದ ಖಾತೆಯ ವಿಸ್ತೀರ್ಣವನ್ನು ಹೆಚ್ಚುವರಿ ಮಾಡಿ ನಮೂದು ಮಾಡಿರುವುದು ಸರ್ಕಾರಕ್ಕೆ ಮಾಡಿರುವ ಅನ್ಯಾಯವಾಗಿರುತ್ತದೆ.
ಸದರಿ ಜಾಗವು 'ವಕ್ಫ್ ಮಂಡಳಿಗೆ ಸೇರಿದ್ದು ಎನ್ನುವುದಕ್ಕೆ ಸೂಕ್ತ ದಾಖಲೆಗಳಿಲ್ಲದಿದ್ದರೂ ನಿಯಮ ಬಾಹಿರವಾಗಿ ಖಾತೆ ಮಾಡಿಕೊಡಲಾಗಿದೆ. ಇದಕ್ಕೆ ಸಂಭಂದಿಸಿದಂತೆ ಅಂದಿನ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ಮಾನ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಭೂಮಾಪಕರು ಸಲ್ಲಿಸಿದ ನಕ್ಷೆಯಲ್ಲಿ ಸದರಿ ಇಲಾಖೆಯ ಮುಖ್ಯಸ್ಥರ ಸಹಿಯೇ ಇಲ್ಲದಿರುವುದನ್ನು ಗುರುತಿಸಿರುತ್ತಾರೆ ಹಾಗೂ ಸದರಿ ಸ್ಥಳದ ವಿಳಾಸವು ಗೆಜೆಟ್ ನೋಟಿಪಿಕೇಷನ್ನಲ್ಲಿ ಇರುವುದಿಲ್ಲ ಹಾಗಾಗಿ ಕೇವಲ ಸ್ಥಳ ತನಿಖೆ ವರದಿ ಮೇರೆಗೆ ಅರ್ಜಿದಾರರ(ವಕ್ಸ್ ಆಸ್ತಿಗಳ ಕಾರ್ಯಪಡೆ) ಕೋರಿಕೆಯನ್ನು ದಾಖಲಿಸುವುದು ಸೂಕ್ತವಾಗಿರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿರುತ್ತಾರೆ
ಅಲ್ಲದೆ ಶಿವಮೊಗ್ಗ ನಗರದ ಲೋಕಲ್ ಪ್ಲಾನಿಂಗ್ ಏರಿಯ ನಕ್ಷೆಯನ್ನು ಗಮನಿಸಿದಾಗ ಶಿವಮೊಗ್ಗ ಮಹಾನಗರ ಯೋಜನೆ 2031'ರ ಪ್ರಕಾರ ಸದರಿ ಜಾಗವು ದಟ್ಟ ಹಸಿರು (ಡಾರ್ಕ್ ಗ್ರೀನ್) ಬಣ್ಣದಿಂದ ಗುರುತಿಸಲ್ಪಟ್ಟದ್ದು ಮತ್ತು ಈಗಾಗಲೇ "ನಿರ್ಮಿತ ಉದ್ಯಾನ ವೆಂದು ಘೋಷಿತವಾಗಿರುತ್ತದೆ. ಕಾನೂನಿನ ಪ್ರಕಾರ ಈ ಜಾಗವನ್ನು ಉದ್ಯಾನವನ, ಸ್ಮಶಾನ ಹಾಗೂ ಆಟದ ಮೈದಾನವನ್ನಾಗಿ ಉಪಯೋಗಿಸಬಹುದೇ ಹೊರತು ಬೇರೆ ಉದ್ದೇಶಗಳಿಗೆ ಉಪಯೋಗಿಸುವಂತಿಲ್ಲ.
ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಇದರೊಟ್ಟಿಗೆ ಲಗತ್ತಿಸಿದ್ದು ತಾವುಗಳು ಅವುಗಳನ್ನು ಕುಲಂಕುಷವಾಗಿ ಪರಿಶೀಲಿಸಿ ಮಾನ್ಯ ನ್ಯಾಯಾಲಯಕ್ಕೆ ಸೂಕ್ತ ಮಾಹಿತಿಯನ್ನು ರವಾನಿಸಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ ಎಂದು ಮನವಿ ಸಲ್ಲಿಸಿರುತ್ತಾರೆ.
Playground Corporation Assets