SUDDILIVE || SHIVAMOGGA
ಕರ್ತವ್ಯದಲ್ಲಿದ್ದ KSRTC ಭದ್ರತಾ ಸಿಬ್ಬಂದಿ ಹೃದಯಾಘಾತಕ್ಕೆ ಬಲಿ-KSRTC security guard dies of heart attack on duty
ಸಾಗರದ ಕೆಎಸ್ಆರ್ಟಿಸಿ ಡಿಪೋದ ಭದ್ರತಾ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಂದೀಪ್ (41) ಮೃತ ಕೆ ಎಸ್ ಆರ್ ಟಿ ಸಿ ಸಿಬ್ಬಂದಿ. ಸಂದೀಪ್ ಸಾಗರದ ಮಾರಿಕಾಂಬ ದೇವಾಲಯದ ಹಿಂಭಾಗದ ರಸ್ತೆಯ ನಿವಾಸಿಯಾಗಿದ್ದಾರೆ.
ಸಂದೀಪ್ ಬುಧವಾರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಸಂದೀಪ್ರನ್ನು ಸಹೋದ್ಯೋಗಿಗಳು ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅಷ್ಟರಲ್ಲೇ ಸಂದೀಪ್ ಸಾವನ್ನಪ್ಪಿದ್ದಾರೆ. ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸಂದೀಪ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ.
ಆಸ್ಪತ್ರೆಗೆ ಕರೆದುಕೊಂಡು ಬಂದ ಸಿಬ್ಬಂದಿ ಚಂದ್ರು ಮಾತನಾಡಿ, ''ನಾನು ಬಸ್ನಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದೇನೆ. ರಾತ್ರಿ ನಾನು ಬಸ್ ಅನ್ನು ಡಿಪೋಗೆ ಬಿಡಲು ಬಂದಾಗ ಗೇಟ್ ಬಳಿ ಹಾರನ್ ಮಾಡಿದ್ರು ಸಹ ಸಂದೀಪ್ ಅವರು ಹೊರಗೆ ಬರಲಿಲ್ಲ. ಇವರು ಬಂದು ಬಸ್ ಚೆಕ್ ಮಾಡಿದ ಮೇಲೆಯೇ ಬಸ್ ಅನ್ನು ಒಳಗೆ ಬಿಡಬೇಕಿತ್ತು. ಬಹಳ ಹೊತ್ತು ಇವರು ಬಾರದ ಕಾರಣಕ್ಕೆ ಇವರ ರೂಂ ನಲ್ಲಿ ಹೋಗಿ ನೋಡಿದಾಗ ಇವರು ಕುಸಿದು ಬಿದ್ದಿದ್ದರು. ತಕ್ಷಣ ನಮ್ಮದೇ ಬಸ್ನಲ್ಲಿ ಸಂದೀಪ್ ಅವರನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದಾಗ ಅಷ್ಟೊತ್ತಿಗಾಗಲೇ ಸಂದೀಪ್ ತೀರಿ ಹೋಗಿದ್ದಾರೆ ಎಂದು ವೈದ್ಯರು ತಿಳಿಸಿದರು'' ಎಂದರು.
ಶಾಸಕರಿಂದ ಸಂತಾಪ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಕೆಎಸ್ಆರ್ಟಿಸಿ ಸಿಬ್ಬಂದಿ ಸಂದೀಪ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
KSRTC security guard dies of heart attack on duty
