SUDDILIVE || SHIVAMOGGA
ಉಷಾ ನರ್ಸಿಂಗ್ ಹೋಮ್ ಅಭಿವೃದ್ಧಿಗೆ ಚಾಲನೆ-ತಡವಾಗದಿರಲಿ ಕಾಮಗಾರಿ-Usha Nursing Home development launched - work should not be delayed
ಶಿವಮೊಗ್ಗ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಇಂದು ಅಕ್ಕಮಹಾದೇವಿ ವೃತ್ತದ (ಉಷಾ ನರ್ಸಿಂಗ್ ಹೋಮ್ ಬಳಿ) ಫ್ಲೈಓವರ್ ಸುತ್ತಮುತ್ತಲಿನ ಪ್ರದೇಶಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.
ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಭಾರತೀಯ ರೈಲ್ವೆ ಇಲಾಖೆಯ ಜಂಟಿ ಸಹಯೋಗದಲ್ಲಿ ಈ ಕಾಮಗಾರಿಯನ್ನು ಕೈಕೊಳ್ಳಲಾಗಿದ್ದು, ಈ ಯೋಜನೆಯಲ್ಲಿ ಪ್ರಮುಖವಾಗಿ ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಾಣ, ಡೆಕ್ ಸ್ಲಾಬ್ಗಳ ಅಳವಡಿಕೆ, ಸುರಕ್ಷತೆಗಾಗಿ ತಡೆಗೋಡೆ ನಿರ್ಮಾಣ, ಸಮರ್ಪಕ ಸಂಚಾರಕ್ಕೆ ಅನುಕೂಲವಾಗುವಂತೆ ಬೀದಿ ದೀಪಗಳ ಅಳವಡಿಕೆ ಹಾಗೂ ರಸ್ತೆ ಸುಧಾರಣೆ ಕಾಮಗಾರಿಗಳನ್ನು ಒಳಗೊಂಡಿದೆ. ಈ ಕಾಮಗಾರಿಗಳು ಸುಗಮ ಸಂಚಾರಕ್ಕೆ, ಮಳೆಗಾಲದಲ್ಲಿ ನೀರು ನಿಲ್ಲುವುದನ್ನು ತಪ್ಪಿಸಲು ಮತ್ತು ಸಾರ್ವಜನಿಕ ಸುರಕ್ಷತೆಗೆ ಮಹತ್ವದ ಕೊಡುಗೆ ನೀಡಲಿವೆ.
ಈ ಹಿಂದೆ ಸಂಸದರು ಸುದ್ದಿಗೋಷ್ಠಿ ನಡೆಸಿ ಉಷಾನರ್ಸಿಂಗ್ ವೃತ್ತದ ಅಭಿವೃದ್ಧಿಗೆ 2 ಕೋಟಿ ಹಣ ತೆಗೆದಿಟ್ಟುರುವುದಾಗಿ ಮಾದ್ಯಮಗಳಿಗೆ ತಿಳಿಸಿದ್ದರು. ಸಂಸದರ ಸುದ್ದಿಗೋಷ್ಠಿ ನಡೆಯಿಸಿ ಒಂದು ವರ್ಷದ ನಂತರ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಈಗಂತೂ ಉಷ ನರ್ಸಿಂಗ್ ಹೋಂ ಸರ್ಕಲ್ ವಾಹನಗಳ ಓಡಾಟದಿಂದ ಧೂಳು ಹೆಚ್ಚಾಗಿ ಪಾದಚಾರಿಗಳಿಗೆ ಮತ್ತು ದ್ವಿಚಕ್ರವಾಹನ ಸವಾರರಿಗೆ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ. ಭೂಮಿಪೂಜೆ ನಡೆಸಿ ಒಂದು ವರ್ಷದ ನಂತರ ಇದರ ಅಭಿವೃದ್ಧಿ ನಡೆಯದಿರಲಿ ಎಂಬುದು ಸುದ್ದಿಲೈವ್ ಆಶಯವಾಗಿದೆ.
ಈ ಸಂದರ್ಭದಲ್ಲಿ ಸಂಸದರಾದ ಶ್ರೀ ಬಿ. ವೈ. ರಾಘವೇಂದ್ರ, ಶಾಸಕರಾದ ಎಸ್ ಎನ್ ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ್ ಸರ್ಜಿ, ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀ ಮಾಯಣ್ಣ ಗೌಡ, ಮಾಜಿ ಸೂಡಾ ಅಧ್ಯಕ್ಷರಾದ ಶ್ರೀ ನಾಗರಾಜ್ ಸೇರಿದಂತೆ ಸ್ಥಳೀಯ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Usha Nursing Home development launched - work should not be delayed
