SUDDILIVE || SHIVAMOGGA
ವನ್ನಿಕುಲ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಲು ಆಗ್ರಹ-Demand to establish a separate corporation board for Vannikula society
ವನ್ನಿಕುಲ ಕ್ಷತ್ರೀಯ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ರಚಿಸಬೇಕು ಹಾಗೂ ೨ಎ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಕರುನಾಡು ರಾಜ್ಯ ವನ್ನಿಕುಲ ಕ್ಷತ್ರೀಯ ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ಟಿ.ಪೆರುಮಾಳ್ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವನ್ನಿಕುಲ ಕ್ಷತ್ರೀಯ ಸಮಾಜದ ಜನಸಂಖ್ಯೆ ರಾಜ್ಯದಲ್ಲಿ ಸುಮಾರು ೪೫ ಲಕ್ಷ ಇದೆ. ನಮ್ಮ ಜಾತಿಯನ್ನು ೨‘ಎಗೆ ಸೇರಿಸಬೇಕು ಎಂದು ಹಲವು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ ನಮಗೆ ೨‘ಎ ನೀಡದೆ ೩ಎನಲ್ಲೇ ಇಟ್ಟಿದ್ದಾರೆ. ನಮ್ಮದು ತೀರಾ ಹಿಂದುಳಿದ ಜಾತಿಯಾಗಿದೆ. ಈ ಸಮಾಜಕ್ಕೆ ಗೌಂಡರ್, ಪಳ್ಳಿ, ವನ್ಯರ್, ಪಡೆಯಾಚ್ಚಿ ಉಪಜಾತಿಗಳು ಕೂಡ ಸೇರುತ್ತವೆ. ಈ ಯಾವ ಜಾತಿಗಳಿಗೂ ಇದೂವರೆಗೂ ನಿಗಮ ಮಂಡಳಿ ಇಲ್ಲ ಎಂದರು.
ಆದರೆ ನಮ್ಮ ಜಾತಿಯನ್ನು ತಿಗಳ ಜಾತಿ ಅಡಿಯಲ್ಲಿ ಸೇರಿಸಲಾಗುತ್ತಿದೆ. ಅವರ ಆಚಾರ-ವಿಚಾರಗಳೇ ಬೇರೆ. ನಮ್ಮ ಆಚಾರ-ವಿಚಾರಗಳೇ ಬೇರೆ. ನಮಗೂ ತಿಗಳರ ಜಾತಿಗೂ ಸಂಬಂಧವೇ ಇಲ್ಲ. ಅವರ ಜಾತಿಯಲ್ಲಿ ನಮ್ಮನ್ನು ಯಾವುದೇ ಕಾರಣಕ್ಕೂ ಸೇರಿಸಬಾರದು. ತಿಗಳರ ಜಾತಿ ಅಡಿಯಲ್ಲಿ ನಿಗಮ ಮಂಡಳಿ ಇದೆ ಆದರೆ ನಮಗೂ ಅದಕ್ಕೂ ಸಂಬಂಧವಿಲ್ಲ. ನಮಗೆ ನಮ್ಮದೇ ಆದ ಪ್ರತ್ಯೇಕ ನಿಗಮ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರವಿಕುಮಾರ್ ಮಾತನಾಡಿ, ನಮ್ಮ ಸಮಾಜದ ವೇದಿಕೆಗಳಿಗೆ ಸಂಬಂಧಪಟ್ಟಂತೆ ವಿಧಾನ ಪರಿಷತ್ ಸದಸ್ಯರಾದ ಶಾರದಾ ಪೂರ್ಯಾನಾಯ್ಕ್ ಮತ್ತು ಶಾಸಕರಾದ ಎಸ್.ಎನ್. ಚನ್ನಬಸಪ್ಪ ಹಾಗೂ ತರೀಕೆರೆ ಶಾಸಕ ಶ್ರೀನಿವಾಸ್ ಅವರು ವಿಧಾನಸಭಾ ಅಧಿವೇಶನದಲ್ಲಿ ಧ್ವನಿ ಎತ್ತಿದ್ದಾರೆ. ಪ್ರತ್ಯೇಕ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿದ್ದಾರೆ. ಹಾಗಾಗಿ ಅವರೆಲ್ಲರಿಗೂ ನಮ್ಮ ಸಮಾಜದ ವತಿಯಿಂದ ಕೃತಜ್ಞತೆಗಳು ಎಂದರು.
ಆದರೆ ಧರ್ಮರಾಯ ಎಜುಕೇಷನ್ ಅಂಡ್ ಕಲ್ಚರಲ್ ಟ್ರಸ್ಟಿನ ಸಂಸ್ಥಾಪಕ ಎಂ. ಗೋವಿಂದರಾಜು ಅವರು ಶಾರದಾ ಪೂರ್ಯಾನಾಯ್ಕ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದನ್ನು ನಾವು ಕಂಡಿಸುತ್ತೇವೆ. ನಮ್ಮ ಬೇಡಿಕೆಗೆ ಅನುಗುಣವಾಗಿ ಸಮಾಜದವರ ಮನವಿಯ ಮೇರೆಗೆ ಶಾರದಾ ಪೂರ್ಯಾನಾಯ್ಕ್ ಅವರು ಸದನದಲ್ಲಿ ಧ್ವನಿ ಎತ್ತಿದ್ದಾರೆ. ಅವರ ಬಗ್ಗೆ ಸಣ್ಣತನದ ಹೇಳಿಕೆ ನೀಡಬಾರದು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಅಶೋಕ್ ಎಂ., ಗೌರವಾಧ್ಯಕ್ಷ ಗೋಪಾಲ್ ಮತ್ತೂರ್, ಪದಾಧಿಕಾರಿಗಳಾದ ಮುರುಗನ್, ಮಾಣಿಕಂ, ರಾಜು ಇದ್ದರು.
ವನ್ನಿಕುಲ ಕ್ಷತ್ರೀಯ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸುವುದರ ಜೊತೆಗೆ ನಮ್ಮ ಸಮಾಜಕ್ಕೆ ೨‘ಎ ಮೀಸಲಾತಿ ನೀಡಬೇಕು. ರಾಜ್ಯದ ಎಲ್ಲಾ ಕಡೆಗಳಲ್ಲಿ ೨‘ಎ ಸರ್ಟಿಫಿಕೇಟ್ ನಿಡುವಂತೆ ಅಧಿಕಾರಿಗಳಿಗೆ ಆದೇಶ ನೀಡಬೇಕು. ಯಾವುದೇ ಕಾರಣಕ್ಕೂ ತಿಗಳರ ಜಾತಿಯೊಂದಿಗೆ ನಮ್ಮನ್ನು ಸಮೀಕರಿಸಬಾರದು. ತಿಗಳರಿಗೂ ವನ್ನಿ ಕುಲ ಸಮಾಜಕ್ಕೂ ಯಾವುದೇ ಸಂಬಂಧವಿಲ್ಲ.
- ಪಿ. ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ
Demand to establish a separate corporation board for Vannikula society
