SUDDILIVE || SHIVAMOGGA
ಆಯನೂರಿನಲ್ಲಿ ನಡೆದ ರಸ್ತೆ ಅಪಘಾತ-ಇಬ್ಬರು ಯುವಕರು ಸಾವು-ಹಿಟ್ ಅಂಡ್ ರನ್ ಶಂಕೆ-Road accident in Ayanur - Two youths die - Hit and run suspected
ಆಯನೂರು ಕೋಟೆ ಬಳಿ ಶುಕ್ರವಾರ ಸಂಜೆ ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ನಿಂದ ಕೆಳಗೆ ಬಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತೊಬ್ಬ ಯುವಕನಿಗೆ ಗಂಭೀರ ಗಾಯವಾಗಿದೆ.
ಕೆಳಗೆ ಬಿದ್ದು ಮೃತಪಟ್ಟ ಯುವಕರ ಮೇಲೆ ಟಯರ್ ನ ಮಾರ್ಕ್ ಬಿದ್ದಿದ್ದು ಹಿಂದಿನಿಂದ ಬಂದ ವಾಹನ ಇಬ್ಬರ ಮೇಲೆ ಹತ್ತಿರುವ ಶಂಕೆ ವ್ಯಕ್ತವಾಗಿದೆ. ಒಂದು ವೇಳೆ ಅಂದುಕೊಂಡಂತೆ ನಡೆದರೆ ಇದೊಂದು ಹಿಟ್ ಅಂಡ್ ರನ್ ಪ್ರಕರಣ ಆಗಲಿದೆ. ಯುವಕರ ಮೇಲೆ ಹತ್ತಿ ಸಾವಿಗೆ ಕಾರಣವಾದ ಹಿಟ್ ಅಂಡ್ ರನ್ ಮಾಡಿರುವ ವಾಹನಕ್ಕಾಗಿ ತೀವ್ರಶೋಧ ನಡೆಯುತ್ತಿದೆ.
ಮೃತರನ್ನು ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಬಳಿಯ ಮಲ್ಲಾಪುರದ ನಿವಾಸಿಗಳಾದ ಅಕಿಫ್ (21) ಮತ್ತು ಚಾಂದ್ ಪೀರ್ (18) ಎಂದು ಗುರುತಿಸಲಾಗಿದೆ. ಇಬ್ಬರೂ ಆಯನೂರಿನಿಂದ ಹಾರನಹಳ್ಳಿ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡ ಯುವಕನನ್ನು ಶಿವಮೊಗ್ಗ ತಾಲೂಕಿನ ಕ್ಯಾತಿನಕೆರೆ ಗ್ರಾಮದ ಗುರುಕಿರಣ್ ಎಂದು ಗುರುತಿಸಲಾಗಿದೆ. ಈತ ಚಾಮೇನಹಳ್ಳಿಯಿಂದ ಆಯನೂರು ಕಡೆಗೆ ಬರುತ್ತಿದ್ದ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ.
ವೇಗವಾಗಿ ಬಂದ ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ತಕ್ಷಣ ಅಕಿಫ್ ಮತ್ತು ಚಾಂದ್ ಪೀರ್ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ, ಹಿಂದಿನಿಂದ ಅತೀ ವೇಗವಾಗಿ ಬಂದ ಯಾವುದೋ ಅಪರಿಚಿತ ವಾಹನವು ರಸ್ತೆಯ ಮೇಲೆ ಬಿದ್ದಿದ್ದ ಈ ಇಬ್ಬರು ಯುವಕರ ಮೇಲೆ ಹರಿದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರೂ ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಯುವಕನ ಮೈಮೇಲೆ ವಾಹನದ ಟೈರ್ ಮಾರ್ಕ್ಗಳು ಅಚ್ಚಾಗಿ ಬಿದ್ದಿರುವುದು ಈ ಘಟನೆಯ ಭೀಕರತೆಯನ್ನು ತೋರಿಸುತ್ತದೆ. ಮತ್ತೊಂದು ಬೈಕ್ನಲ್ಲಿದ್ದ ಗುರುಕಿರಣ್ಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಕುಂಸಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
Road accident in Ayanur - Two youths die - Hit and run suspected
