SUDDILIVE || SHIVAMOGGA
ಉದ್ಯೋಗ ಸೃಷ್ಠಿಸದ ಕೇಂದ್ರ ಸರ್ಕಾರವನ್ನ ವಜಾಗೊಳಿಸುವಂತೆ NSUI ಆಗ್ರಹ-NSUI demands dismissal of central government for not creating jobs
ಉದ್ಯೋಗ ನೀಡದೆ ಯುವಕರಿಗೆ ವಂಚುತ್ತಿರುವ ಕೇಂದ್ರ BJP ಸರ್ಕಾರದ ವಿರುದ್ಧ ಶಿವಮೊಗ್ಗ ಜಿಲ್ಲಾ NSUI ಶಿವಪ್ಪ ನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ. ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೇ ಯುವ ಜನತೆಗೆ ಅನ್ಯಾಯವೆಸಗುತ್ತಿರುವ ಕೇಂದ್ರ ಸರ್ಕಾರವನ್ನು ವಜಾಗೊಳಿಸಲು ಒತ್ತಾಯಿಸಲಾಯಿತು.
ಕೇಂದ್ರ ಸರ್ಕಾರದಲ್ಲಿ ಹಲವಾರು ವರ್ಷಗಳಿಂದ ನೇಮಕಾತಿ ಕೈಗೊಳ್ಳದೇ 10 ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಖಾಲಿ ಬಿಡಲಾಗಿದೆ. ನರೇಂದ್ರ ಮೋದಿಯವರು ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಇದುವರೆಗೂ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದರ ಬದಲಿಗೆ ಕೋಟ್ಯಂತರ ನಿರುದ್ಯೋಗಿಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕೇಂದ್ರ ಸರ್ಕಾರದ ಸ್ವಾಮ್ಯದ ಹಲವಾರು ಕೈಗಾರಿಕೆಗಳನ್ನು ಮುಚ್ಚುವ ಮೂಲಕ ಲಕ್ಷಾಂತರ ಕುಟುಂಬಗಳು ಬೀದಿಗೆ ಬರುವಂತೆ ಮಾಡಲಾಗಿದೆ. ವಿವಿಧ ನಿಗಮಗಳಲ್ಲಿ ಹೊರಗುತ್ತಿಗೆ ಪದ್ಧತಿಯನ್ನು ಜಾರಿ ಮಾಡುವ ಮೂಲಕ ಹೊರಗುತ್ತಿಗೆ ನೌಕರರಿಗೆ ಜೀವನ ಭದ್ರತೆ ಇಲ್ಲದಂತೆ ಮಾಡಲಾಗಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಬಿದ್ದಿದ್ದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ನಿರುದ್ಯೋಗ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ದೂರಲಾಗಿದೆ.
‘ಭಾರತ ಅಭಿವೃದ್ಧಿ ಹೊಂದುತ್ತಿದೆ’ ಎಂದು ಘೋಷಣೆ ಮಾಡಲಾಗುತ್ತಿದೆ. ಆದರೆ, ದೇಶದ ಜನಸಂಖ್ಯೆಗೆ ತಕ್ಕಂತೆ ಉದ್ಯೋಗ ಭರ್ತಿ ಮಾಡಿಕೊಳ್ಳದೇ ಯುವಜನತೆಯ ಜೀವನದೊಂದಿಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ಹುದ್ದೆಗಳು ಖಾಲಿ ಇರುವುದರಿಂದ ಸಾರ್ವಜನಿಕರ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಲಕ್ಷಾಂತರ ಕೋಟಿಗಳ ಬಜೆಟ್ ಮಂಡಿಸುವ ಕೇಂದ್ರ ಸರ್ಕಾರ ನಿರುದ್ಯೋಗ ಸಮಸ್ಯೆಯನ್ನು ಮತ್ತಷ್ಟು ಉಲ್ಬಣ ಮಾಡುತ್ತಿದೆ.
ಆದ್ದರಿಂದ ರಾಷ್ಟ್ರಪತಿಗಳು ಕೂಡಲೇ ಮಧ್ಯೆ ಪ್ರವೇಶಿಸಿ ಯುವಜನತೆಯ ವಿರೋಧಿ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು. ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಔಟ್ ಸೋರ್ಸ್ ಪದ್ಧತಿಯನ್ನು ಕೈಬಿಟ್ಟು ಎಲ್ಲಾ ಇಲಾಖೆಗಳಲ್ಲಿ, ನಿಗಮಗಳಲ್ಲಿ ಖಾಯಂ ಹುದ್ದೆಗಳನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ರಾಷ್ಟ್ರ ಪತಿ ಗಳಿಗೆ ಒತ್ತಾಯಿಸಲಾಯಿತು
ಈ ಸಂದರ್ಭದಲ್ಲಿ N S U I ಜಿಲ್ಲಾ ಅಧ್ಯಕ್ಷರಾದ ವಿಜಯ್ ಕಾರ್ಯಾಧ್ಯಕ್ಷರಾದ ರವಿ ಕಟಿಕೆರೆ ನಗರಾಧ್ಯಕ್ಷರಾದ ರವಿಕುಮಾರ್ ಉಪಾಧ್ಯಕ್ಷರುಗಳಾದ ಆದಿತ್ಯ ಸುಬಾನ್ ಪ್ರಧಾನ ಕಾರ್ಯದರ್ಶಿ ಗಳಾದ ಚಂದ್ರೋಜಿ ರಾವ್ ವರುಣ್ , ಅಭಿ ತಾಫಿಕ್ ಫರಾಜ್, ಶ್ರೀಕಾಂತ್, ಯೂಸುಫ್, ಅಭಿ, ಪ್ರಭು, ರಿಹಾನ್, ಸಾದ್ ಉಲ್ಲಾ, ಪವನ,ಕುಮಾರ್, ಪ್ರಜ್ವಲ್,ಲೋಹಿತ್, ಸುಲ್ತಾನ, ಅಡೀಬ್ ಅಭಿ ದೃಶ್ಯ ಕಿಶನ್ ಚಂದನ್ ಉಮೇಶ್ ಅಂತೋನಿ ನಾಗರಾಜ್ ಹಾಗು N S U I ನ ಹಲವಾರು ಪದಾಧಿಕಾರಿಗಳು ಉಪಸ್ಥಿತ ರಿದ್ದರು.
NSUI demands dismissal of central government for not creating jobs
