₹3.6 ಲಕ್ಷ ಮೌಲ್ಯದ ಕಳವು ಪ್ರಕರಣ ಭೇದಿಸಿದ ಆರ್‌ಪಿಎಫ್ ಮತ್ತು ಜಿಆರ್‌ಪಿ- RPF and GRP crack theft case worth Rs 3.6 lakh

SUDDILIVE || SHIVAMOGGA

₹3.6 ಲಕ್ಷ ಮೌಲ್ಯದ ಕಳವು ಪ್ರಕರಣ ಭೇದಿಸಿದ ಆರ್‌ಪಿಎಫ್ ಮತ್ತು ಜಿಆರ್‌ಪಿ- RPF and GRP crack theft case worth Rs 3.6 lakh   

RPF, GRP


ಪ್ರಯಾಣಿಕರ ₹3.60 ಲಕ್ಷ ಮೌಲ್ಯದ ವಸ್ತುಗಳ ಕಳವು ಪ್ರಕರಣವನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್), ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಜೊತೆ ಸಮನ್ವಯದಲ್ಲಿ ಯಶಸ್ವಿಯಾಗಿ ಭೇದಿಸಿ, ಅಪರಾಧಿಯನ್ನು ಬಂಧಿಸಿದ್ದಾರೆ.

ಈ ಪ್ರಕರಣವು ಬೆಂಗಳೂರು ನಿವಾಸಿ ಶ್ರೀಮತಿ ಅಂಬಿಕಾ ಅವರು 12.03.2026ರಂದು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ದೂರಿನ ಪ್ರಕಾರ, ಶ್ರೀಮತಿ ಅಂಬಿಕಾ ಅವರು ತಮ್ಮ ಮಗ ಮತ್ತು ಮಗಳೊಂದಿಗೆ ರೈಲು ಸಂಖ್ಯೆ 20651 ತಾಳಗುಪ್ಪ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಕೆಎಸ್‌ಆರ್ ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ ಆನಂದಪುರಂ ರೈಲು ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ರೈಲು ಸಂಜೆ 8:15ರ ಸುಮಾರಿಗೆ ಕುಂಸಿ ರೈಲು ನಿಲ್ದಾಣದಿಂದ ಹೊರಟ ಬಳಿಕ, ಸುಮಾರು 35 ಗ್ರಾಂ ಚಿನ್ನಾಭರಣ ಹಾಗೂ ₹10,000 ನಗದು ಹೊಂದಿದ್ದ ತಮ್ಮ ಹ್ಯಾಂಡ್‌ಬ್ಯಾಗ್ ಕಾಣೆಯಾಗಿರುವುದು ಅವರಿಗೆ ತಿಳಿಯಿತು. ಕಳುವಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹3.60 ಲಕ್ಷವಾಗಿದೆ.

ದೂರು ಬಂದ ತಕ್ಷಣವೇ ಆರ್‌ಪಿಎಫ್ ಶಿವಮೊಗ್ಗ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕುಂಸಿ ರೈಲು ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ತಾಂತ್ರಿಕ ವಿಶ್ಲೇಷಣೆ ಆರಂಭಿಸಿತು. ಹಿರಿಯ ಅಧಿಕಾರಿಗಳು ತನಿಖೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಿದರು. ಆರ್‌ಪಿಎಫ್ ಶಿವಮೊಗ್ಗ, ಸಿಐಬಿ ಮೈಸೂರು ಹಾಗೂ ಸಿಪಿಡಿಎಸ್ ಮೈಸೂರು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ, ಜಿಆರ್‌ಪಿ ಶಿವಮೊಗ್ಗ ತಂಡಕ್ಕೆ ಸಹಕಾರ ನೀಡಲಾಯಿತು.

ವಿಶೇಷ ತಂಡವು ಸಿಸಿಟಿವಿ ದೃಶ್ಯಾವಳಿಗಳ ಸೂಕ್ಷ್ಮ ಪರಿಶೀಲನೆ ನಡೆಸಿ, ಶಂಕಿತನ ಚಲನವಲನವನ್ನು ವಿಶ್ಲೇಷಿಸಿ, ಶಂಕಿತನ ಸುಳಿವು ಘಟನಾ ಸ್ಥಳದಿಂದ ಸುಮಾರು 50 ಕಿಮೀ ದೂರದ ಸಾಗರದವರೆಗೆ ಪತ್ತೆಯಾಯಿತು. ಸಾಗರದಲ್ಲಿನ ಖಾಸಗಿ ಸಂಸ್ಥೆಯಿಂದ ಲಭ್ಯವಾದ ಸಿಸಿಟಿವಿ ದೃಶ್ಯಾವಳಿಗಳು ಪ್ರಮುಖ ಸುಳಿವು ನೀಡಿದವು. ನಿರಂತರ ತಾಂತ್ರಿಕ ನಿಗಾವಹಣೆ, ಕ್ಷೇತ್ರ ಪರಿಶೀಲನೆ, ಮೂಲ ಮಾಹಿತಿ ಸಂಗ್ರಹಣೆ ಹಾಗೂ ಚಲನವಲನ ವಿಶ್ಲೇಷಣೆಯ ಮೂಲಕ ತಂಡವು ಶಂಕಿತನನ್ನು ದಾವಣಗೆರೆ ಜಿಲ್ಲೆಯವನು ಎಂದು ಗುರುತಿಸಿತು. ತಂಡವು ಶಂಕಿತನ ಅಡಗುತಾಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಯಿತು. ತನಿಖೆ ವೇಳೆ, ತಿಪಟೂರು ಮತ್ತು ದಾವಣಗೆರೆಗಳಲ್ಲಿ ದಾಖಲಾಗಿದ್ದ ಪ್ರಯಾಣಿಕರ ವಸ್ತು ಕಳವು ಪ್ರಕರಣಗಳಲ್ಲಿ ಆರೋಪಿಯ ವಿರುದ್ಧ ಎರಡು ಜಾಮೀನು ರಹಿತ ವಾರಂಟ್‌ಗಳು ಬಾಕಿ ಇರುವುದೂ ತಿಳಿದುಬಂದಿತು.

ನಿರಂತರ ಕಾರ್ಯಾಚರಣೆ ಮತ್ತು ಸ್ಥಳೀಯ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಆರೋಪಿಯನ್ನು ಗುರುತಿಸಿ ವಶಕ್ಕೆ ಪಡೆಯಲಾಯಿತು.ಬಂಧಿತ ಆರೋಪಿಯನ್ನು ಜಿ.ಎಸ್. ಪಟೇಲ್ (23) ಎಂದು ಗುರುತಿಸಲಾಗಿದೆ. 

ಈತ ಶಿವಕುಮಾರಸ್ವಾಮಿ ಅವರ ಪುತ್ರನಾಗಿದ್ದು, ದಾವಣಗೆರೆ ಜಿಲ್ಲೆಯ ನಿವಾಸಿಯಾಗಿದ್ದಾನೆ. ಈತ ಈ ಹಿಂದೆ ದಾವಣಗೆರೆ ಮತ್ತು ಅರಸೀಕೆರೆ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳಲ್ಲೂ ಭಾಗಿಯಾಗಿದ್ದು, ಅವುಗಳ ವಿಚಾರಣೆ ಪ್ರಸ್ತುತ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ವಿಚಾರಣೆ ವೇಳೆ ಆರೋಪಿಯು ಅಪರಾಧವನ್ನು ಒಪ್ಪಿಕೊಂಡಿದ್ದಾನೆ.ಆರೋಪಿಯನ್ನು ಪೊಲೀಸ್ ಕಸ್ಟಡಿ ಅರ್ಜಿಯೊಂದಿಗೆ ಶಿವಮೊಗ್ಗದ ಮಾನ್ಯ ಪಿಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಯನ್ನು 10 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ಮುಂದಿನ ತನಿಖೆಯನ್ನು ಜಿಆರ್‌ಪಿ ಶಿವಮೊಗ್ಗ ತಂಡ ಮುಂದುವರಿಸಿದೆ.

RPF and GRP crack theft case worth Rs 3.6 lakh

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close