SUDDILIVE || SHIVAMOGGA
ನಗರ ಸಭೆಯಿಂದ ಬಂದಿದ್ದೇವೆ ಎಂದು ಚಿನ್ನಾಭರಣ ಕಳುವು-The thieves stole gold and jewelry claiming to be from the city council
‘ನಗರಸಭೆಯಿಂದ ಬಂದಿದ್ದೇವೆʼ ಎಂದು ನಂಬಿಸಿ ದಂಪತಿಯ ಗಮನ ಬೇರೆಡೆ ಸೆಳೆದು ಮನೆಯಲ್ಲಿದ್ದ ಸುಮಾರು ₹11.62 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಸಾಗರದ ಶ್ರೀಧರ ನಗರದಲ್ಲಿ ಘಟನೆ ನಡೆದಿದೆ.
ಸಾಗರದ ಪ್ರಭಾಕರ ಎಂ.ಹೆಗಡೆ ಎಂಬುವವರು ಈ ಸಂಬಂಧ ದೂರು ನೀಡಿದ್ದಾರೆ. ಪ್ರಭಾಕರ್ ಅವರ ಮನೆಗೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು, ಮನೆಯ ನೀರಿನ ಸಮಸ್ಯೆ ಸರಿಪಡಿಸಲು ನಗರಸಭೆಯಿಂದ ಬಂದಿರುವುದಾಗಿ ಹೇಳಿಕೊಂಡಿದ್ದರು. ಇವರ ಮಾತನ್ನು ನಂಬಿದ ಪ್ರಭಾಕರ ಅವರು ಒಬ್ಬ ವ್ಯಕ್ತಿಯನ್ನು ಟೆರೇಸ್ ಮೇಲೆ ಕರೆದೊಯ್ದಿದ್ದರು. ಇದೇ ವೇಳೆ ಕೆಳಗಿದ್ದ ಮತ್ತೊಬ್ಬ ವ್ಯಕ್ತಿ ಪ್ರಭಾಕರ ಅವರ ಪತ್ನಿಯನ್ನು ಟೆರೇಸ್ಗೆ ಕರೆಸಿಕೊಂಡಿದ್ದಾನೆ. ನಂತರ ಅವರು ಕೆಲಸ ಮುಗಿದಿದೆ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದ್ದಾರೆ.
ಅಪರಿಚಿತರು ಹೋದ ನಂತರ ಅನುಮಾನಗೊಂಡು ಪರಿಶೀಲಿಸಿದಾಗ, ಸುಮಾರು 216 ಗ್ರಾಂ ತೂಕದ ವಿವಿಧ ಚಿನ್ನಾಭರಣ ಹಾಗೂ ಬೆಳ್ಳಿ ಲೋಟ ಕಳುವಾಗಿರುವುದು ಗೊತ್ತಾಗಿದೆ. ಕಳುವಾದ ವಸ್ತುಗಳಲ್ಲಿ 45 ಗ್ರಾಂನ ಕರಿಮಣಿ ಸರ, 30 ಗ್ರಾಂನ ಕಂಠಿ ಸರ ಹಾಗೂ ಬಂಗಾರದ ಬಳೆಗಳು ಸೇರಿವೆ. ಸಾಗರ ನಗರ ಪೊಲೀಸರು ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.
The thieves stole gold and jewelry claiming to be from the city council

