ಹೊಸನಗರ: ಅಕ್ರಮ ಬೀಟೆ ಮರಗಳ ಜಪ್ತಿ; ಆರೋಪಿಗಾಗಿ ತೀವ್ರ ಹುಡುಕಾಟ-Hosanagara-Illegal betel trees seized; Intensive search for the accused

 SUDDILIVE || HOSANAGARA

ಹೊಸನಗರ: ಅಕ್ರಮ ಬೀಟೆ ಮರಗಳ ಜಪ್ತಿ; ಆರೋಪಿಗಾಗಿ ತೀವ್ರ ಹುಡುಕಾಟ-Hosanagara-Illegal betel trees seized; Intensive search for the accused 

Hosanagara, betel

 

ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡಿದು ಅಡಗಿಸಿಡಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಬೀಟೆ ಮರಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ಜಪ್ತಿ ಮಾಡಿರುವ ಘಟನೆ ಹೊಸನಗರ ವಲಯದಲ್ಲಿ ನಡೆದಿದೆ.

ಘಟನೆಯ ವಿವರ

ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿ, ನಂದ್ರಿ ಗ್ರಾಮದ ಸರ್ವೆ ನಂಬರ್ 15 ರ ನಂದ್ರಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಒತ್ತುವರಿ ಜಮೀನಿನಲ್ಲಿ ಈ ಕೃತ್ಯ ನಡೆದಿದೆ. ಕೃಷಿ ಹೊಂಡದ ಪಕ್ಕದಲ್ಲಿ ಸುಮಾರು 2 ರಿಂದ 3 ವರ್ಷಗಳ ಹಿಂದೆ ಅಕ್ರಮವಾಗಿ ಕಡಿತಲೆ ಮಾಡಲಾಗಿದ್ದ 14 ಬೀಟೆ ಜಾತಿಯ ಮರದ ನಾಟ ತುಂಡುಗಳನ್ನು ಮಣ್ಣಿನಲ್ಲಿ ಮುಚ್ಚಿಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಸಿಬ್ಬಂದಿ, ಮಣ್ಣಿನಲ್ಲಿದ್ದ ಎಲ್ಲಾ ನಾಟಗಳನ್ನು ಇಲಾಖೆಯ ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಪರಾರಿ

ಈ ಅಕ್ರಮ ಕೃತ್ಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಟೌನ್‌ನ ಮಂಡಿಬೆಲೆ ರಸ್ತೆ ನಿವಾಸಿ ಗಣೇಶ ಬಿನ್ ಬಾಬುಶೆಟ್ಟಿ (40 ವರ್ಷ) ಎಂಬಾತನ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ 1963 ಮತ್ತು ಕರ್ನಾಟಕ ಅರಣ್ಯ ಕಾನೂನು 1969 ರ ಅಡಿಯಲ್ಲಿ ಹೊಸನಗರ ವಲಯ ಕಚೇರಿಯಲ್ಲಿ ಮೊಕದ್ದಮೆ (ಸಂಖ್ಯೆ: 14/2026-27) ದಾಖಲಿಸಲಾಗಿದೆ. ಮೇ 18 ರಿಂದ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಜಾಲ ಬೀಸಲಾಗಿದೆ. ಆರೋಪಿಯ ಬಗ್ಗೆ ನಿಖರ ಮಾಹಿತಿ ಬಂದ ತಕ್ಷಣ ನಿಯಮಾನುಸಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯ ತಂಡ

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಹೊಸನಗರ ವಲಯ ಅರಣ್ಯಾಧಿಕಾರಿ ಶ್ರೀ ಅನಿಲ್ ಕುಮಾರ್ ಎಸ್., ಉಪ ವಲಯ ಅರಣ್ಯಾಧಿಕಾರಿ ಶ್ರೀ ನವೀನ ಕುಮಾರ್ ಸಿ.ಎಂ., ಗಸ್ತು ಅರಣ್ಯ ಪಾಲಕರಾದ ಶ್ರೀ ಪ್ರಶಾಂತ ಜಿ., ಶ್ರೀ ಪುಟ್ಟಸ್ವಾಮಿ ಕೆ.ವಿ., ಶ್ರೀ ಗಿರೀಶ್ ಎಸ್. ಹಾಗೂ ಇಲಾಖೆಯ ಸಿಬ್ಬಂದಿಗಳಾದ ಸುರೇಶ, ಪುನೀತ್, ಮಹೇಶ ಹೆಚ್.ಜಿ. ಪಾಲ್ಗೊಂಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close