ಸಚಿವರಿಂದ ಸಮಾಜವಾದಿ ನಾಯಕ ಕೋಣಂದೂರು ಲಿಂಗಪ್ಪನವರ ಭೇಟಿ-Minister meets Samajwadi leader Konandur Lingappa

SUDDILIVE || SHIVAMOGGA

ಸಚಿವರಿಂದ ಸಮಾಜವಾದಿ ನಾಯಕ ಕೋಣಂದೂರು ಲಿಂಗಪ್ಪನವರ ಭೇಟಿ-Minister meets Samajwadi leader Konandur Lingappa    

Konanduru, samajwadi



ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪನವರು ಶುಕ್ರವಾರದಂದು ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಹಿರಿಯ ಸಮಾಜವಾದಿ ನಾಯಕರು ಹಾಗೂ ಸ್ವಾತಂತ್ರö್ಯ ಹೋರಾಟಗಾರರಾದ ಕೋಣಂದೂರು ಲಿಂಗಪ್ಪನವರ ಮನೆಗೆ ಭೇಟಿ ನೀಡಿ, ಅಭಿನಂದಿಸಿ, ಹಿರಿಯರೊಂದಿಗೆ ಮಾತನಾಡಿದರು.
ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನವರಾದ, ಹಿರಿಯ ಸಮಾಜವಾದಿ ನಾಯಕರು ಹಾಗೂ ಸ್ವಾತಂತ್ರö್ಯ ಹೋರಾಟಗಾರರಾಗಿ ಪರಿಚಿತರಾದ ಕೋಣಂದೂರು ಲಿಂಗಪ್ಪನವರಿಗೆ ಕುವೆಂಪು ವಿಶ್ವವಿದ್ಯಾಲಯ 35 ನೇ ಘಟಿಕೋತ್ಸವದಲ್ಲಿ ಘೋಷಿಸಲಾದ ಡಾಕ್ಟರೇಟ್ ಪದವಿ(ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರ)ಯನ್ನು ಶುಕ್ರವಾರ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ಸಿಂಡಿಕೇಟ್ ಸದಸ್ಯರು, ಇತರೆ ಅಧಿಕಾರಿಗಳು ಅವರ ಮನೆಗೆ ತೆರಳಿ ಪ್ರದಾನ ಮಾಡಿದ ಸಂದರ್ಭದಲ್ಲಿ ಸಚಿವರು ಭೇಟಿ ನೀಡಿ ಹಿರಿಯರೊಂದಿಗೆ ಮಾತನಾಡಿದರು.
ತಮ್ಮಂತಹ ಹಿರಿಯರಿಗೆ ಡಾಕ್ಟರೇಟ್ ಲಭಿಸಿರುವುದು ಅತ್ಯಂತ ಸಂತಸದ ವಿಷಯ. ನಿಮ್ಮನ್ನು ಭೇಟಿ ಮಾಡಿ ಮಾತನಾಡುತ್ತಿರುವುದು ನಮ್ಮ ಪುಣ್ಯ ಎಂದು ಹಿರಿಯರ ಆಶೀರ್ವಾದ ಪಡೆದ ಅವರು, ಇದೇ ಸಮಯದಲ್ಲಿ ತಮ್ಮ ತಂದೆಯವರಾದ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪನವರ ರಾಜಕೀಯ ಜೀವನದ ಘಟನೆಯೊಂದನ್ನು ಸ್ಮರಿಸಿಕೊಂಡು, ಹಿರಿಯರೊಂದಿಗೆ ಹಂಚಿಕೊಂಡರು.
ನನ್ನ ತಂದೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಕುವೆಂಪುರವರನ್ನು ಭೇಟಿಯಾಗಿದ್ದರು. ಆ ವೇಳೆ ಕುವೆಂಪುರವರು ಕುಪ್ಪಳಿಯ ತಮ್ಮ ಮನೆಯನ್ನು ನೋಡಬೇಕೆಂಬ ಇಂಗಿತ ವ್ಯಕ್ತಪಡಿಸಿದಾಗ ಬಂಗಾರಪ್ಪನವರು ಖುದ್ದಾಗಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿ, ಅಂದಿನ ಸಚಿವರಾಗಿದ್ದ ಮಲ್ಲಿಕಾರ್ಜುನಯ್ಯ ಹಾಗೂ ಹಾಗೂ ವೈದ್ಯರ ತಂಡದೊಂದಿಗೆ ಕುವೆಂಪುರವರ ಮನೆ ತೋರಿಸಿ, ಅವರನ್ನು ಗೌರವದಿಂದ ಕರೆತಂದಿದ್ದರು," ಎಂದು ಮಧು ಬಂಗಾರಪ್ಪ ನೆನಪಿಸಿಕೊಂಡರು. ಅಂದಿನ ದಿನಗಳಲ್ಲಿ ಇದ್ದಂತಹ ಬದ್ಧತೆ ಮತ್ತು ಹಿರಿಯರ ಬಗ್ಗೆ ಇದ್ದ ಗೌರವ ಇಂದು ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ಕೋಣಂದೂರು ಲಿಂಗಪ್ಪನವರು ಶಿಕ್ಷಣ ವ್ಯವಸ್ಥೆ, ಫಲಿತಾಂಶದ ಬಗ್ಗೆ ವಿಚಾರಿಸಿದಾಗ, ಸಚಿವರು, ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ. 94.10 ಫಲಿತಾಂಶ ಪಡೆಯುವ ಮೂಲಕ ಈ ಬಾರಿ ಐತಿಹಾಸಿಕ ಸಾಧನೆ ದಾಖಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿ, ಹಿಂದೆ ಈ ಪ್ರಮಾಣವು ಶೇ. 70-80 ರಷ್ಟಿರುತ್ತಿತ್ತು. ಪೂರಕ ಪರೀಕ್ಷೆಯ ಬದಲಾಗಿ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸುವ ಸರ್ಕಾರದ ಹೊಸ ನೀತಿಯು ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಪರೀಕ್ಷೆ ಮುಗಿದ 20 ದಿನಗಳಲ್ಲೇ ಮತ್ತೊಂದು ಅವಕಾಶ ನೀಡುವುದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿದೆ ಎಂದ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವುದೇ ನಮ್ಮ ಸರ್ಕಾರದ ಗುರಿ ಎಂದು ಸಚಿವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.
ಈ ವೇಳೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಶರತ್ ಅನಂತಮೂರ್ತಿ, ಕುಲ ಸಚಿವರಾದ ಹೇಮಂತ್ ಎನ್, ವಿವಿ ಸಿಂಡಿಕೇಟ್ ಸದಸ್ಯರು, ಇತರೆ ಮುಖಂಡರು, ಜನಪ್ರತಿನಿಧಿಗಳು ಹಾಜರಿದ್ದರು.

Minister meets Samajwadi leader Konandur Lingappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close