ಕುವೆಂಪು ರಂಗಮಂದಿರದಲ್ಲಿ ಸೋಮವಾರ ಸಾಹಿತ್ಯ ಪೂರ್ಣಿಮೆಯ 251ನೇ ತಿಂಗಳ ಕಾರ್ಯಕ್ರಮ-251st monthly program of Sahitya Purnima on Monday at Kuvempu Theatre

 SUDDILIVE || SHIVAMOGGA

ಕುವೆಂಪು ರಂಗಮಂದಿರದಲ್ಲಿ ಸೋಮವಾರ ಸಾಹಿತ್ಯ ಪೂರ್ಣಿಮೆಯ 251ನೇ ತಿಂಗಳ ಕಾರ್ಯಕ್ರಮ-251st monthly program of Sahitya Purnima on Monday at Kuvempu Theatre    

Sahithya, purnima

ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ 251ನೇ ತಿಂಗಳ ಸಾಹಿತ್ಯ ಪೂರ್ಣಿಮೆ ಸಮಿತಿಯ ಆಶ್ರಯದಲ್ಲಿ ಸಾಹಿತ್ಯ ಪೂರ್ಣಿಮೆಯ 251ನೇ ತಿಂಗಳ ಕಾರ್ಯಕ್ರಮವನ್ನು ಸೋಮವಾರ ಸಂಜೆ 5.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಮಳೆಗಾಲದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಈ ಬಾರಿ ಕಾರ್ಯಕ್ರಮವನ್ನು ಕುವೆಂಪು ರಂಗಮಂದಿರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ನಗರದ ಸುಮಾರು 500ರಿಂದ 600ಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಹಾಗೂ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸುಮಾರು 300 ಗಾಯಕರು ಒಟ್ಟಾಗಿ ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಬಳಿಕ ಐದು ತಂಡಗಳಿಂದ ಭಾವಗೀತೆ, ಭಕ್ತಿಗೀತೆ, ತತ್ವಪದ, ದಾಸರಪದ, ವಚನ ಹಾಗೂ ಜನಪದ ಗೀತೆಗಳ ಗಾಯನ ನಡೆಯಲಿದೆ.

ಇದೇ ವೇಳೆ 100 ಮಕ್ಕಳು ಸಮೂಹ ಗಾಯನ ಹಾಗೂ ನೃತ್ಯ ಪ್ರದರ್ಶನ ನೀಡಲಿದ್ದು, ಜನಪದ ಗೀತೆಗಳಿಗೆ ಭರತನಾಟ್ಯ ಪ್ರದರ್ಶನವೂ ಇರಲಿದೆ. ರಂಗನಟ ಸುಚೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ವೀಣಾ ಬನ್ನಂಜೆಯವರ ಕೃತಿ ಆಧಾರಿತ "ನನ್ನ ಪಿತಾಮಹ" ನಾಟಕ ಪ್ರದರ್ಶನಗೊಳ್ಳಲಿದ್ದು, ಬೆಂಗಳೂರಿನ ಚಲನಚಿತ್ರ ಹಾಗೂ ಧಾರಾವಾಹಿ ಕಲಾವಿದರ ತಂಡ ಭಾಗವಹಿಸಲಿದೆ.

ಕಾರ್ಯಕ್ರಮದಲ್ಲಿ ಹಾಸ್ಯ, ಕಥೆ, ಕವನ ಹಾಗೂ ಹನಿಗವನಗಳ ಸಾಂಸ್ಕೃತಿಕ ರಸದೌತಣವೂ ಇರಲಿದ್ದು, ಸಂಜೆ 5.30ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ.

21 ವರ್ಷಗಳ ಸಾಹಿತ್ಯ ಪಯಣ

ಸಾಹಿತ್ಯ ಪೂರ್ಣಿಮೆ ಕಾರ್ಯಕ್ರಮಕ್ಕೆ 21 ವರ್ಷಗಳ ಇತಿಹಾಸವಿದ್ದು, ಮಾಜಿ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಮನೆಯಂಗಳದಲ್ಲೇ ಮೊದಲ ಕಾರ್ಯಕ್ರಮ ಆರಂಭವಾಗಿತ್ತು. "ಮನೆ ಮನ ಸಾಹಿತ್ಯ ಕಾರ್ಯಕ್ರಮ" ಎಂಬ ಪರಿಕಲ್ಪನೆಯೊಂದಿಗೆ ಆರಂಭಗೊಂಡ ಈ ವೇದಿಕೆ ಕಳೆದ ಎರಡು ದಶಕಗಳಲ್ಲಿ ನೂರಾರು ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದೆ ಎಂದು ಡಿ. ಮಂಜುನಾಥ್ ತಿಳಿಸಿದರು.

ಗಣ್ಯರ ಭಾಗವಹಿಸುವಿಕೆ

ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಹಾಗೂ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಗೌರವಾಧ್ಯಕ್ಷರಾದ ಪೂಜ್ಯ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ರಂಗನಟ ಸುಚೇಂದ್ರ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ಕೆ.ಇ. ಕಾಂತೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಾಗರಿಕ ಸನ್ಮಾನ ಸ್ವೀಕರಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ ಅವರನ್ನು ಅಭಿನಂದಿಸಲಾಗುವುದು ಎಂದು ತಿಳಿಸಿದರು.

251st monthly program of Sahitya Purnima on Monday at Kuvempu Theatre

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close