SUDDILIVE || SHIVAMOGGA
ಭದ್ರಾವತಿ: ಮದುವೆಯಾದ ಬಳಿಕ ವರದಕ್ಷಿಣೆ ಕಿರುಕುಳ, ಜೀವ ಬೆದರಿಕೆ ಆರೋಪ – ಪತಿ ಸೇರಿ ಮೂವರ ವಿರುದ್ಧ ಎಫ್ಐಆರ್-Bhadravati: FIR against three people including husband, alleging dowry harassment and life threats after marriage
ಭದ್ರಾವತಿ, ಜು.26: ಮದುವೆಯಾದ ಬಳಿಕ ಹೆಚ್ಚಿನ ವರದಕ್ಷಿಣೆ ತರುವಂತೆ ನಿರಂತರ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದು, ಜೀವ ಬೆದರಿಕೆ ಹಾಕಿರುವ ಆರೋಪದ ಮೇರೆಗೆ ಪತಿ, ಅತ್ತೆ ಹಾಗೂ ಮಾವ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರಾವತಿ ತಾಲೂಕಿನ ನೆಲ್ಲಿಸರ ಗ್ರಾಮದ ನಿವಾಸಿ 30 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ, ಬೆಂಗಳೂರಿನ ಯಲಹಂಕ ನಿವಾಸಿಗಳಾದ ಪತಿ ತೇಜಸ್ವಿ ಮಲ್ಲಿಕಾರ್ಜುನಯ್ಯ, ಅತ್ತೆ ಶೈಲಾ ಹಾಗೂ ಮಾವ ಮಲ್ಲಿಕಾರ್ಜುನಯ್ಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ ವಿವಿಧ ಕಲಂಗಳು ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
20 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಮದುವೆ
ದೂರಿನ ಪ್ರಕಾರ, 2023ರ ಮಾರ್ಚ್ನಲ್ಲಿ ನಿಶ್ಚಿತಾರ್ಥ ನಡೆದಿದ್ದು, ಅದೇ ವರ್ಷದ ಆಗಸ್ಟ್ 27ರಂದು ಕಡೂರಿನ ಕನ್ವೆನ್ಷನ್ ಹಾಲ್ನಲ್ಲಿ ವಿವಾಹ ನೆರವೇರಿತ್ತು. ಮದುವೆಗೆ ವಧುವಿನ ಕುಟುಂಬವು ₹20 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿದ್ದರೂ, ಚಿನ್ನಾಭರಣ ಹಾಗೂ ವರದಕ್ಷಿಣೆ ವಿಚಾರವಾಗಿ ಆರೋಪಿಗಳು ಅಸಮಾಧಾನ ವ್ಯಕ್ತಪಡಿಸಿ ಕಿರುಕುಳ ಆರಂಭಿಸಿದ್ದರು ಎಂದು ಆರೋಪಿಸಲಾಗಿದೆ.
₹3 ಲಕ್ಷದ ತಾಳಿ ಸರ ಬೇಡಿಕೆ
ಅತ್ತೆಯು ₹3 ಲಕ್ಷ ಮೌಲ್ಯದ ತಾಳಿ ಸರ ತರುವಂತೆ ಒತ್ತಾಯಿಸಿದ್ದು, ಹೆಚ್ಚಿನ ವರದಕ್ಷಿಣೆ ಹಾಗೂ ಚಿನ್ನ ತರದಿದ್ದಕ್ಕಾಗಿ ಮಹಿಳೆ ಹಾಗೂ ಆಕೆಯ ಕುಟುಂಬವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗರ್ಭಿಣಿಯಾಗಿದ್ದಾಗಲೂ ಕಿರುಕುಳ
ಗರ್ಭಿಣಿಯಾಗಿದ್ದ ಸಂದರ್ಭದಲ್ಲಿಯೂ ಆರೈಕೆ ಮಾಡದೇ, ಗರ್ಭಪಾತವಾಗುವ ಉದ್ದೇಶದಿಂದ ಪಪ್ಪಾಯಿ ಹಾಗೂ ಕೊಳೆತ ಹಣ್ಣಿನ ಜ್ಯೂಸ್ ಕುಡಿಯಲು ಒತ್ತಾಯಿಸಿದರು. ಮನೆದಲ್ಲಿ ಒಬ್ಬಳೇ ಬಿಟ್ಟು ಹೋಗುವುದು, ಅನಾರೋಗ್ಯದಲ್ಲಿದ್ದರೂ ಸಹಾಯ ಮಾಡದಿರುವುದು, ರೈಲು ನಿಲ್ದಾಣದಲ್ಲಿ ಬಿಟ್ಟು ಹೋಗುವುದು ಸೇರಿದಂತೆ ಹಲವು ರೀತಿಯ ಕಿರುಕುಳ ನೀಡಲಾಗಿದೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.
ಸಂಧಾನ ವಿಫಲ, ಜೀವ ಬೆದರಿಕೆ ಆರೋಪ
2024ರಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಬಳಿಕ ನ್ಯಾಯಾಲಯದ ಸೂಚನೆಯಂತೆ ಸಂಧಾನಕ್ಕೆ ಹಾಜರಾದರೂ ಅದು ವಿಫಲಗೊಂಡಿದೆ. ನಂತರ 2026ರ ಜುಲೈ 10ರಂದು ಪತಿಯು ದೂರವಾಣಿ ಮೂಲಕ ಕರೆ ಮಾಡಿ ವಿಚ್ಛೇದನ ನೀಡದಿದ್ದರೆ ಮಹಿಳೆ, ಆಕೆಯ ಸಹೋದರ, ಮಗ ಹಾಗೂ ಕುಟುಂಬದವರನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಭಯದಿಂದ ತಕ್ಷಣ ದೂರು ನೀಡಲಾಗದೆ, ಧೈರ್ಯ ಮಾಡಿ ನಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವುದಾಗಿ ಮಹಿಳೆ ತಿಳಿಸಿದ್ದಾರೆ.
ಪ್ರಕರಣ ದಾಖಲು
ದೂರಿನ ಆಧಾರದ ಮೇಲೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಕಲಂ 85, 352, 351(2), 3(5) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಕಲಂ 3 ಮತ್ತು 4ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

