SUDDILIVE || SHIVAMOGGA
ಕಾಡುಪ್ರಾಣಿಯನ್ನು ರಕ್ಷಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ: ಐವರು ಪಾರು-Five people escape after hitting an electric pole while trying to rescue a wild animal
ಹೊಸನಗರ: ರಸ್ತೆಗೆ ಅಡ್ಡಬಂದ ಕಾಡುಪ್ರಾಣಿಯನ್ನು ರಕ್ಷಿಸಲು ಚಾಲಕ ಪ್ರಯತ್ನಿಸಿದ ವೇಳೆ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಗರ–ಮಾಸ್ತಿಕಟ್ಟೆ ರಸ್ತೆಯಲ್ಲಿ ನಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬವೇ ಕಾರಿನ ಮೇಲೆ ಉರುಳಿಬಿದ್ದರೂ, ಕಾರಿನಲ್ಲಿದ್ದ ಐವರು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಮಣಿಪಾಲದಿಂದ ಸಾಗರದತ್ತ ತೆರಳುತ್ತಿದ್ದ ಕಾರು, ನೂಲಿಗೇರಿ ಅಬ್ಬಾಸ್ ಎಂಬುವವರ ಮನೆಯ ಎದುರು ತಲುಪಿದಾಗ ದಿಢೀರನೆ ಕಾಡುಪ್ರಾಣಿಯೊಂದು ರಸ್ತೆಗೆ ಅಡ್ಡಬಂದಿದೆ. ಈ ವೇಳೆ ಪ್ರಾಣಿಯನ್ನು ಉಳಿಸುವ ಉದ್ದೇಶದಿಂದ ಚಾಲಕ ಕಾರನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದ್ದಾರೆ.
ಆದರೆ ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ವಿದ್ಯುತ್ ಕಂಬ ಕಾರಿನ ಮೇಲೆಯೇ ಧರೆಗುರುಳಿದೆ.
ಕಾರಿನಲ್ಲಿ ಸಾಗರ ನಿವಾಸಿ ಪ್ರಕಾಶ್ ಹಾಗೂ ಮೂವರು ಮಕ್ಕಳು ಸೇರಿದಂತೆ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಭಾರೀ ಅವಘಡವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.
ಘಟನೆ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಪಿಎಸ್ಐ ಶಿವಾನಂದ ಕೋಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
