SUDDILIVE || SHIVAMOGGA
ಮೈದುಂಬಿದ ತುಂಗೆಗೆ ಬಾಗಿನ ಅರ್ಪಣೆ- An offering of the mouth to the minded Thunga
ಶಿವಮೊಗ್ಗ: ಶಿವಮೊಗ್ಗದ ಜೀವನಾಡಿಯಾಗಿ, ಮಲೆನಾಡಿನ ಜನಜೀವನಕ್ಕೆ ಆಸರೆಯಾಗಿರುವ ತಾಯಿ ತುಂಗಾ ನದಿಗೆ ಶಾಸಕ ಚೆನ್ನಬಸಪ್ಪ, ಎಂಎಲ್ ಸಿ ಡಾ.ಧನಂಜಯ ಸರ್ಜಿ ಹಾಗೂ ಭಾರತೀಯ ಜನತಾ ಪಕ್ಷದ ಶಿವಮೊಗ್ಗ ನಗರ ಘಟಕದ ವತಿಯಿಂದ ಮಂಗಳವಾರ ಭಕ್ತಿಭಾವದಿಂದ ಬಾಗಿನ ಅರ್ಪಣೆ ಮಾಡಲಾಯಿತು.
ನಗರದ ಕೋಟೆ ರಸ್ತೆಯ ಐತಿಹಾಸಿಕ ಶ್ರೀ ಕೋರ್ಪಳಯ್ಯನ ಛತ್ರದ ಆವರಣದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ, ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತಿರುವ ತಾಯಿ ತುಂಗೆಗೆ ಸಂಪ್ರದಾಯಬದ್ಧವಾಗಿ ಇಬ್ಬರು ಶಾಸಕರು ಬಾಗಿನ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ನದಿಯು ಸದಾ ತುಂಬಿ ಹರಿಯಲಿ, ರಾಜ್ಯ ಹಾಗೂ ಜಿಲ್ಲೆಯ ಜನರಿಗೆ ಸಮೃದ್ಧಿ, ಸುಭಿಕ್ಷೆ, ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಂಎಲ್ ಸಿ ಡಾ.ಸರ್ಜಿ, ತುಂಗಾ ನದಿ ಶಿವಮೊಗ್ಗ ಜಿಲ್ಲೆಯ ಜನರ ಜೀವನಾಡಿಯಾಗಿದ್ದು, ಕೃಷಿ, ಕುಡಿಯುವ ನೀರು ಹಾಗೂ ಜನಜೀವನದ ಅವಿಭಾಜ್ಯ ಅಂಗವಾಗಿದೆ. ಪ್ರಕೃತಿಯ ಕೊಡುಗೆಯಾಗಿರುವ ನದಿಯ ಬಗ್ಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷ ಬಾಗಿನ ಅರ್ಪಿಸುವ ಪರಂಪರೆ ನಡೆದುಕೊಂಡು ಬಂದಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಬಾಗಿನ ಸಮರ್ಪಣೆ ವೇಳೆ ನಾಡಿನ ಸರ್ವಾಂಗೀಣ ಅಭಿವೃದ್ಧಿ, ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ಶಾಶ್ವತ ಸುಭಿಕ್ಷೆ, ರೈತರ ಬೆಳೆ ಸಮೃದ್ಧಿಯಾಗಿ ಬೆಳೆಯಲಿ, ಅನ್ನದಾತರ ಬದುಕಿನಲ್ಲಿ ಸಂತೋಷ ನೆಲೆಸಲಿ, ಪ್ರತಿಯೊಬ್ಬ ನಾಗರಿಕನಿಗೂ ಆಯುರಾರೋಗ್ಯ, ಸುಖ-ಶಾಂತಿ ಮತ್ತು ನೆಮ್ಮದಿ ದೊರೆಯಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಶ್ರೀ ದತ್ತಾತ್ರಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್, ನಗರ ಅಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ ಸೇರಿದಂತೆ ಬಿಜೆಪಿ ಶಿವಮೊಗ್ಗ ಜಿಲ್ಲಾ ಹಾಗೂ ನಗರ ಘಟಕದ ಪದಾಧಿಕಾರಿಗಳು, ಪ್ರಮುಖ ಮುಖಂಡರು, ಕಾರ್ಯಕರ್ತರು ಹಾಗೂ ಭಕ್ತಾದಿಗಳು ಭಾಗವಹಿಸಿ ತಾಯಿ ತುಂಗೆಗೆ ಭಕ್ತಿಪೂರ್ವಕವಾಗಿ ಬಾಗಿನ ಅರ್ಪಿಸಿದರು.
An offering of the mouth to the minded Thunge
